ನವದೆಹಲಿ: ದೇಶದಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಜೆಎನ್ಯು ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಮಿತಿ ವರದಿಯನ್ನು ಸ್ವೀಕರಿಸದಿರಲು ಜೆಎನ್ ಯು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ.
ಕಳೆದ ರಾತ್ರಿ ಜೆಎನ್ ಯು ವಿದ್ಯಾರ್ಥಿಗಳ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಮಿತಿ ನಡೆಸಿರುವ ತನಿಖೆ ನ್ಯಾಯಾಯುತವಾಗಿ ನಡೆದಿಲ್ಲ. ಇದೊಂದು ಅನ್ಯಾಯದ ತನಿಖಾ ವರದಿಯಾಗಿದ್ದು, ಇದನ್ನು ನಾವು ಸ್ವೀಕರಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಜೆಎನ್ಯು ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹ ಕಾರ್ಯಕ್ರಮದಲ್ಲಿ ವಿವಿಯ 21 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ವಿವಿಯ ತನಿಖಾ ಸಮಿತಿ ವರದಿ ಹಿನ್ನೆಲೆಯಲ್ಲಿ 21 ವಿದ್ಯಾರ್ಥಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯವು ಈ ಹಿಂದೆ ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ನಿನ್ನೆಯಷ್ಟೇ ತನ್ನ ತನಿಖೆಯ ವರದಿಯನ್ನು ವಿವಿಯ ಉಪಕುಲಪತಿ ಎಂ.ಜಗದೀಶ್ ಕುಮಾರ್ ಅವರಿಗೆ ಸಲ್ಲಿಸಿತ್ತು.
ವಿಶ್ವವಿದ್ಯಾಲಯದ ನಿಯಮಗಳಿಗೆ ವಿರುದ್ಧವಾಗಿ ನವೆಂಬರ್ 9ರಂದು ಅಫ್ಜಲ್ ಗುರು ಪರವಾಗಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿದ್ದು ನಿಜ ಎಂದು ತನಿಖಾ ಸಮಿತಿ ಒಮ್ಮತವಾಗಿ ಅಭಿಪ್ರಾಯಪಟ್ಟಿತ್ತು.