26/11 ಕಾರ್ಯಾಚರಣೆಗೆ ಐಎಸ್ ಐಯಿಂದ ಹೆಡ್ಲಿಗೆ ಭಾರೀ ಹಣ ಸಂದಾಯ: ಉಜ್ವಲ್ ನಿಕಂ

26/11 ರ ಮುಂಬೈ ಭಯೋತ್ಪಾದಕ ದಾಳಿ ಕಾರ್ಯಾಚರಣೆಗೆ ಪಾಕಿಸ್ತಾನದ ಐಎಸ್ಐಯಿಂದ ತನಗೆ ಭಾರೀ...
ಡೇವಿಡ್ ಹೆಡ್ಲಿ
ಡೇವಿಡ್ ಹೆಡ್ಲಿ

ಮುಂಬೈ: 26/11 ರ ಮುಂಬೈ ಭಯೋತ್ಪಾದಕ ದಾಳಿ ಕಾರ್ಯಾಚರಣೆಗೆ ಪಾಕಿಸ್ತಾನದ ಐಎಸ್ಐಯಿಂದ ತನಗೆ ಭಾರೀ ಪ್ರಮಾಣದ ಹಣ ಸಂದಾಯವಾಗಿತ್ತು ಎಂದು ಡೇವಿಡ್ ಹೆಡ್ಲಿ ಕೊನೆಗೂ ಬಾಯಿಬಿಟ್ಟಿದ್ದಾನೆ.

ಮುಂಬೈ ದಾಳಿಗೆ ಹಣ ನೀಡಿರಲಿಲ್ಲ ಎಂದೇ ಡೇವಿಡ್ ಇಷ್ಟು ದಿನ ಹೇಳಿಕೊಂಡು ಬಂದಿದ್ದ. ಅಮೆರಿಕದ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಡ್ಲಿ ವಿಚಾರಣೆ ನಡೆಯುತ್ತಿದ್ದು, ಇಂದು ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ.

ಹೆಡ್ಲಿ ವಿಚಾರಣೆ ನಂತರ ಮಾಧ್ಯಮದವರ ಮುಂದೆ ಮಾತನಾಡಿದ ಕೇಸಿನ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ಪಾಕಿಸ್ತಾನ ಮೂಲದ ಅಮೆರಿಕ ಉಗ್ರಗಾಮಿ ಇಂದು 4 ಮುಖ್ಯ ವಿಷಯಗಳನ್ನು ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.

ಆ 4 ಮುಖ್ಯ ವಿಷಯಗಳು: ಮೊದಲನೆಯದು, 26/11ರ ಮುಂಬೈ ದಾಳಿಯ ಸಂಪೂರ್ಣ ಕಾರ್ಯಾಚರಣೆಗೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಐಎಸ್ಐಯಿಂದ ಭಾರೀ ಹಣ ಸಂದಾಯವಾಗಿದೆ.

ಎರಡನೆಯದು, ಲಷ್ಕರ್ ಇ ತಯ್ಯಬಾ ಸಂಘಟನೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರನ್ನು ಕೊಲ್ಲಲು ಯತ್ನ ನಡೆಸಿತ್ತು ಎಂಬುದು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ಹಿಡಿದಿದ್ದರು, ಆದರೆ ಆತ ತಪ್ಪಿಸಿಕೊಂಡ. ಈ ವಿಷಯ ಎಲ್ ಇಟಿ ಉಗ್ರರಿಂದ ಕೇಳಲ್ಪಟ್ಟೆ ಎಂದು ಹೆಡ್ಲಿ ಹೇಳಿದ್ದಾನೆ.

ಮೂರನೆಯದು, ಮುಂಬೈ ದಾಳಿ ನಂತರ ಎಲ್ ಇಟಿ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಒತ್ತಡ ಬಂದಿತ್ತು. ಹಾಗಾಗಿ ಡೆನ್ಮಾರ್ಕ್ ದಾಳಿ ಬಗ್ಗೆ ಎಲ್ ಇಟಿ ಮೃದು ಧೋರಣೆ ತಳೆಯಿತು ಎಂದಿದ್ದಾನೆ. ಆದರೆ ತನ್ನ ಪತ್ನಿ ಶಜಿಯಾ ಎಲ್ಲಿದ್ದಾಳೆಂದು ವಿಚಾರಣೆ ವೇಳೆ ಎಷ್ಟೇ ಕೇಳಿದರೂ ಹೆಡ್ಲಿ ಹೇಳಲಿಲ್ಲ. ಶಜಿಯಾ ಈಗಲೂ ನನ್ನ ಕಾನೂನುಬದ್ಧ ಪತ್ನಿ. ಆದರೆ ಅವಳೆಲ್ಲಿದ್ದಾಳೆ ಎಂಬುದನ್ನು ನಾನು ಹೇಳುವುದಿಲ್ಲ ಎಂದಿದ್ದಾನೆ.

ಕೊನೆಯದಾಗಿ ಹೆಡ್ಲಿ ಹೇಳಿದ ವಿಷಯವೆಂದರೆ, ಎಲ್ ಇಟಿ ಕಾರ್ಯಾಚರಣೆಯಿಂದ ಗುಜರಾತ್ ನಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಇಶ್ರತ್ ಜಹಾನ್ ಕೊಲೆಯಾದಳು ಎಂಬುದು. ಡೇವಿಡ್ ಹೆಡ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ನಾಳೆ ಕೂಡ ಮುಂದುವರಿಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com