ನವದೆಹಲಿ: ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಎರಡು ತಿಂಗಳ ಕಾಲಮಿತಿ ನಿಗದಿಪಡಿಸಿದ್ದಾರೆ.
ಅವರು ನಿನ್ನೆ ದೆಹಲಿಯಲ್ಲಿ ಆಡಳಿತಕ್ಕೆ ಸಂಬಂಧಿಸಿದ ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲು ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕೆಂದು ಪ್ರಧಾನಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಜನರ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ ಆಡಳಿತದ ಬಹುಮುಖ್ಯ ಅಂಶ. ಅದಕ್ಕಾಗಿ ಮುಂದಿನ ಒಂದು ತಿಂಗಳು ಗಮನಹರಿಸಿ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿರುವುದಾಗಿ ವಾಹಿನಿಯೊಂದು ವರದಿ ಮಾಡಿದೆ.
ಪ್ರಧಾನ ಮಂತ್ರಿಗಳ ಸಚಿವಾಲಯ ಪ್ರತಿನಿತ್ಯ ನೂರಾರು ದೂರುಗಳನ್ನು ಸ್ವೀಕರಿಸುತ್ತಿದೆ. ದೇಶಾದ್ಯಂತ ನಾಗರಿಕ ಸ್ನೇಹಿ ಕೇಂದ್ರಗಳನ್ನು ಪರಾಮರ್ಶಿಸಲು ವಿಸ್ತಾರವಾದ ಜಿಲ್ಲಾ ಕೇಂದ್ರಿತ ಕಚೇರಿಗಳನ್ನು ತೆರೆಯಲು ಪ್ರಧಾನ ಮಂತ್ರಿ ಸೂಚಿಸಿದ್ದಾರೆ.
ಸಾಮಾಜಿಕ ವಲಯಗಳಿಗೆ ಸರ್ಕಾರದ ಯೋಜನೆಗಳು ಯಾವ ಹಂತದಲ್ಲಿದೆ ಮತ್ತು ಕುಷ್ಠರೋಗ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಹಾಗೂ ವಿಧವಾ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯಗಳ ಯೋಜನೆಗಳ ಪ್ರಗತಿ, ಭೂ ದಾಖಲೆಗಳ ಡಿಜಿಟಲೀಕರಣ, ಆಧಾರ್ ಖಾತೆಯೊಂದಿಗೆ ದಾಖಲೆಗಳ ಏಕೀಕರಣ ಮಾಡುವಂತೆ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಯಶಸ್ವಿ ಜಾರಿಗೆ ಕ್ರಮ ಕೈಗೊಳ್ಳುವಂತೆ ಕೂಡ ಅವರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವಾಹಿನಿ ವರದಿ ಮಾಡಿದೆ.
Advertisement