ನವದೆಹಲಿ: ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಕಾಪ್ಚರ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮತ್ತು ಭಾರತೀಯ ಮಧ್ಯವರ್ತಿಗಳ ನಡುವೆ ನಡೆದ ಹಣಕಾಸುವ ವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಗೆ ಸೂಚಿಸಿದೆ.
ಈ ಮಧ್ಯೆ ಹಗರಣದ ಆರೋಪಿ ಗೌತಮ್ ಖೇತನ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು. ವಿಚಾರಣೆ ವೇಳೆ ಸ್ವಿಸ್ ಮಧ್ಯವರ್ತಿ ಕಾರ್ಲೋ ಜೆರೋಸಾ ಮತ್ತು ಗುಡೋ ಹಸ್ಕೆ ಅವರಿಂದ ಹಣ ಸ್ವೀಕರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸಿಬಿಐ ಮೂಲಗಳ ಪ್ರಕಾರ, ಆರೋಪಿ ಖೇತನ್ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ನೀಡುತ್ತಿಲ್ಲ. ಆದರೆ ಇಟಲಿ ಹೆಲಿಕಾಪ್ಟರ್ ನಿರ್ಮಾಣ ಕಂಪನಿಯಿಂದ ಹಣ ಪಡೆಯಲು ಐಡಿಎಸ್ ಟುನೀಶಿಯ, ಐಡಿಎಸ್ ಇಂಡಿಯಾ ಹಾಗೂ ಏರೋಮ್ಯಾಟ್ರಿಕ್ಸ್ ಬಳಸಲಾಗಿದೆ ಎಂದು ಖಚಿತಪಡಿಸಿದ್ದಾನೆ.
ಕಾಪ್ಟರ್ ಖರೀದಿ ಹಗರಣ ಇಂದು ಸಹ ಸಂಸತ್ತಿನಲ್ಲಿ ಪ್ರತಿಧ್ವನಿಸಿದ್ದು, ಒಪ್ಪಂದಕ್ಕೆ ಸಂಬಂಧಿಸಿದಂತೆ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಗೆ ಕಾಂಗ್ರೆಸ್ ಎಲ್ಲಾ ರೀತಿಯ ನೆರವು ನೀಡಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.