ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ 70 ಸಾವಿರ ನ್ಯಾಯಾಧೀಶರ ಅಗತ್ಯ: ಮುಖ್ಯ ನ್ಯಾ. ಟಿಎಸ್ ಠಾಕೂರ್

ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು 70,000 ಕ್ಕೂ ಹೆಚ್ಚು ನ್ಯಾಯಾಧೀಶರು ಬೇಕಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ಟಿಎಸ್ ಠಾಕೂರ್ ಹೇಳಿದ್ದಾರೆ.
ನ್ಯಾ. ಟಿಎಸ್ ಠಾಕೂರ್
ನ್ಯಾ. ಟಿಎಸ್ ಠಾಕೂರ್

ನವದೆಹಲಿ: ಕಡಿಮೆ ಇರುವ ನ್ಯಾಯಾಧೀಶರ ಸಂಖ್ಯೆ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ಟಿಎಸ್ ಠಾಕೂರ್ ಬಾಕಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು 70,000 ಕ್ಕೂ ಹೆಚ್ಚು ನ್ಯಾಯಾಧೀಶರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಸಮ್ಮುಖದಲ್ಲಿ ನ್ಯಾಯಾಂಗ ಸುಧಾರಣೆ ಬಗ್ಗೆ ಮಾತನಾಡಿದ್ದ ನ್ಯಾ. ಟಿಎಸ್ ಠಾಕೂರ್, ನ್ಯಾಯಾಧೀಶರ ಕೊರತೆ ಎದುರಾಗಿರುವುದಕ್ಕೆ ಹಾಗೂ ನ್ಯಾಯ ವಿತರಣೆ ವಿಳಂಬವಾಗುತ್ತಿರುವುದಕ್ಕೆ ಕಣ್ಣೀರಿಟ್ಟಿದ್ದರು. ಈಗ ಮತ್ತೊಮ್ಮೆ ನ್ಯಾಯಾಧೀಶರ ಕೊರತೆ ಬಗ್ಗೆ ಪ್ರಸ್ತಾಪಿಸಿದ್ದು, ನ್ಯಾಯ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು ವಿಳಂಬ ನೀತಿ ಅನುಸರಿಸುವಂತಿಲ್ಲ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಹೈಕೋರ್ಟ್ ನ ಸರ್ಕ್ಯೂಟ್ ಬೆಂಚ್ ನ ಶತಮಾನೋತ್ಸವದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನ್ಯಾ.ಟಿಎಸ್ ಠಾಕೂರ್, ನ್ಯಾಯಾಧೀಶರ ನೇಮಕ ಶೀಘ್ರಗತಿಯಲ್ಲಿ ನಡೆಸಲು ನ್ಯಾಯಾಂಗ ಯತ್ನಿಸುತ್ತಿದೆ. ಆದರೆ ನೇಮಕಾತಿ ಪ್ರಕ್ರಿಯೆಯ ಭಾಗವಾಗಿರುವ ಕಾರ್ಯಾಂಗ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ  ಹೈಕೋರ್ಟ್ ಗಳ 170 ನ್ಯಾಯಾಧೀಶರ ನೇಮಕಾತಿಯನ್ನು ಸರ್ಕಾರ ಬಾಕಿ ಇರಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮಾಹಿತಿ ನೀಡಲಾಗಿದ್ದು, ಸಾಧ್ಯವಾದಷ್ಟೂ ತ್ವರಿತಗತಿಯಲ್ಲಿ ನ್ಯಾಯಾಧೀಶರ ನೇಮಕಕ್ಕೆ ಮನವಿ ಮಾಡಲಾಗಿದೆ ಎಂದು ಟಿಎಸ್ ಠಾಕೂರ್ ಹೇಳಿದ್ದಾರೆ. ಹೈಕೋರ್ಟ್ ಗಳಲ್ಲಿ ತಕ್ಷಣವೇ ಭರ್ತಿಯಾಗಬೇಕಿರುವ 450 ಹುದ್ದೆಗಳು ಖಾಲಿ ಇವೆ. 1987 ರ ಭಾರತಿಯ ಕಾನೂನು ಆಯೋಗದ ವರದಿಯ ಪ್ರಕಾರ ಬಾಕಿ ಇದ್ದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಗೊಳಿಸಲು 44 ಸಾವಿರ ನ್ಯಾಯಾಧೀಶರ ನೇಮಕವಾಗಬೇಕಿತ್ತು. ಆದರೆ ಈಗ ದೇಶದಲ್ಲಿ ಕೇವಲ 18 ಸಾವಿರ ನ್ಯಾಯಾಧೀಶರಿದ್ದು ಈಗ 70 ಸಾವಿರ ನ್ಯಾಯಾಧೀಶರ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com