ನವದೆಹಲಿ: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂಜಿಎನ್ ಆರ್ ಇಜಿಎಸ್) ಅಡಿ ರಾಜ್ಯಗಳಿಗೆ ನೀಡಬೇಕಾದ ಹಣವನ್ನು ಶಿಘ್ರದಲ್ಲೇ ಬಿಡುಗಡೆಗೊಳಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಬರ ಪೀಡಿತ ಪ್ರದೇಶದ ರೈತರಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ರಾಜ್ಯಗಳಿಗೆ ಸೂಚಿಸಿ ಎಂದು ನ್ಯಾ.ಎಂ ಬಿ ಲೊಕುರ್ ಮತ್ತು ಎನ್ ವಿ ರಮಣ ಅವರನ್ನೊಳಗೊಂಡ ನ್ಯಾಯಾಪೀಠ ಕೇಂದ್ರಕ್ಕೆ ಆದೇಶಿಸಿದೆ.
ಬರ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಬಂಧೆಗಳನ್ನು ಜಾರಿಗೊಳಿಸಲು ಆಯುಕ್ತರನ್ನು ನೇಮಿಸಲು ರಾಜ್ಯಗಳಿಗೆ ಸೂಚಿಸಿ ಎಂದು ನ್ಯಾಯಾಪೀಠ ತಿಳಿಸಿದೆ.
ಸಂಸತ್ತು ಜಾರಿಗೊಳಿಸಿದ ಕಾನೂನು ನಾವು ಪಾಲಿಸುವುದಿಲ್ಲ ಎಂದು ರಾಜ್ಯಗಳು ಹೇಳುವಂತಿಲ್ಲ. ಕಾನೂನಿನ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ಬೇಸಿಗೆಯಲ್ಲೂ ಬರ ಪೀಡಿತ ಪ್ರದೇಶಗಳಲ್ಲಿ ಬಿಸಿಯೂಟವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.