ಮುಂಬೈ: ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ ಹಾಗೂ ಇತರ 5 ಆರೋಪಿಗಳಿಗೆ ಎನ್ ಐಎ ಕ್ಲೀನ್ ಚಿಟ್ ನೀಡಿರುವುದರ ಬಗ್ಗೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿದ್ದು ಹಿಂದುತ್ವ ಹಾಗೂ ರಾಷ್ಟ್ರೀಯವಾದವನ್ನು ಉಗ್ರತ್ವದೊಂದಿಗೆ ಹೋಲಿಕೆ ಮಾಡುವುದು ತಪ್ಪು ಎಂದು ಹೇಳಿದೆ.
ಇಸ್ಲಾಂ ನ ಮೂಲಭೂತವಾದಿಗಳಿಂದ ಉಂಟಾಗುತ್ತಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಬದಲು, ಈ ಹಿಂದಿನ ಯುಪಿಎ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸಲು ಹಿಂದು ಭಯೋತ್ಪಾದನೆ ಎಂಬ ಭಯವನ್ನು ಸೃಷ್ಟಿಸಿತ್ತು. "ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್, ಕರ್ನಲ್ ಪ್ರಸಾದ್ ಪುರೋಹಿತ್ ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿತ್ತು ಎಂದು ಶಿವಸೇನೆ ಆರೋಪಿಸಿದೆ.
ಹಿಂದೂ ಭಯೋತ್ಪಾದನೆ ಎಂಬ ಭಯ ಸೃಷ್ಟಿಸುವುದರಿಂದ ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನೂ ಯುಪಿಎ ಸರ್ಕಾರ ಯೋಚಿಸಿರಲಿಲ್ಲ. ಪರಿಣಾಮವಾಗಿ ಭಾರತದಲ್ಲಿ ನಡೆದ ಭಯೋತ್ಪಾದನಾ ಪ್ರಕರಣಗಳ ಉಗ್ರರನ್ನು ವಶಕ್ಕೆ ನೀಡುವಂತೆ ಭಾರತ ಕೇಳಿದರೂ ಪಾಕಿಸ್ತಾನ ಕರ್ನಲ್ ಪುರೋಹಿತ್ ಅಂತವರನ್ನು ಹಸ್ತಾಂತರಿಸಿ ಎಂಬ ಬೇಡಿಕೆ ಮುಂದಿಡುತ್ತಿತ್ತು, ಕಾಂಗ್ರೆಸ್ ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಪರಿಚಯಿಸಿದ್ದರಿಂದ ಲಾಭವಾಗಿದ್ದು ಪಾಕಿಸ್ತಾನಕ್ಕೇ ಎಂದು ಶಿವಸೇನೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಯುಪಿಎ ಸರ್ಕಾರ ಹಿಂದೂಗಳನ್ನು ವಿನಾಕಾರಣ ಭಯೋತ್ಪಾದನೆ ಪ್ರಕರಣದಲ್ಲಿ ಸಿಲುಕಿಸಿದ್ದರಿಂದ ಭಾರತದಲ್ಲಿ ಪಾಕ್ ಪರ ಉಗ್ರರೇ ದಾಳಿ ನಡೆಸಿದರೂ ಅದು ಹಿಂದೂಗಳೇ ನಡೆಸಿರುವ ದಾಳಿ ಎಂದು ಪಾಕಿಸ್ತಾನ ಹೇಳುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗುತ್ತಿ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.
ಸಾದ್ವಿ ಪ್ರಗ್ಯಾ ಅವರೊಂದಿಗೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ 21 ಅಮಾಯಕ ಮುಸ್ಲಿಮರು ಆರೋಪ ಮುಕ್ತರಾಗಿದ್ದಾರೆ. ಆದರೆ ಸ್ಫೋಟ ಪ್ರಕರಣದ ನಿಜವಾದ ಅಪರಾಧಿಗಳು ಪಾಕಿಸ್ತಾನದಲ್ಲಿದ್ದಾರೆ ಎಂದು ಶಿವಸೇನೆ ಹೇಳಿದೆ.
Advertisement