ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶಗಳು ಭಾರತದ ರಾಜ್ಯಗಳಲ್ಲ ಎಂದು ತಪ್ಪಾಗಿ ಚಿತ್ರಿಸಿರುವುದನ್ನು ವಿರೋಧಿಸುವ ಕರಡು ಮಸೂದೆಯನ್ನ ನರೇಂದ್ರ ಮೋದಿ ಸರ್ಕಾರ ತಯಾರಿಸಿರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ.
ಈ ವಿಷಯದಲ್ಲಿ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕೆಂದು ಅದು ಒತ್ತಾಯಿಸಿದೆ. ಭಾರತದ ಸಂಸತ್ತು ತಯಾರಿಸಿದ ಕರಡು ಮಸೂದೆ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ. ಇಂತಹ ಕ್ರಮವನ್ನು ಭಾರತ ನಿಲ್ಲಿಸಬೇಕು ಎಂದು ಅದು ಹೇಳಿದೆ. ಈ ಕುರಿತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು ಮಧ್ಯಪ್ರವೇಶಿಸಬೇಕೆಂದು ಪತ್ರ ಬರೆದಿದೆ. ವಿವಾದಿತ ಭೂವ್ಯೋಮ ಮಾಹಿತಿ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಭಾರತ ಸರ್ಕಾರ ಪ್ರಯತ್ನಿಸುತ್ತಿರುವುದಕ್ಕೆ ಮಧ್ಯಪ್ರವೇಶಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿ ವಿವಾದಿತ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದ ಭಾಗಗಳು ಭಾರತಕ್ಕೆ ಸೇರಿದ್ದು ಎಂದು ಭಾರತದ ಭೂಪಟದಲ್ಲಿ ತೋರಿಸಲಾಗುತ್ತಿದೆ. ಆದರೆ ಅದು ನಿಜವಾಗಲೂ ತಪ್ಪಾಗಿದ್ದು, ಕಾನೂನಿನ ದೃಷ್ಟಿಯಿಂದಲೂ ಒಪ್ಪಲಾಗುವುದಿಲ್ಲ. ವಿವಾದಿತ ಭೂ ಪ್ರದೇಶ ಭಾರತಕ್ಕೆ ಸೇರಬೇಕೆ ಅಥವಾ ಪಾಕಿಸ್ತಾನಕ್ಕೆ ಸೇರಬೇಕೆ ಎಂಬ ಬಗ್ಗೆ ನಿರ್ಧರಿಸಲು ವಿಶ್ವಸಂಸ್ಥೆ ನಿಯೋಗದ ಆಶ್ರಯದಲ್ಲಿ ನಿಷ್ಪಕ್ಷಪಾತ ಜನಮತ ಪಡೆಯಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.
Advertisement