ನವದೆಹಲಿ: ಐದು ಸಹವರ್ತಿ ಬ್ಯಾಂಕ್ ಗಳನ್ನು ವಿಲೀನಗೊಳಿಸಬೇಕು ಎಂಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಸ್ತಾವನೆಯನ್ನು ಖಂಡಿಸಿ 5 ಸಹವರ್ತಿ ಬ್ಯಾಂಕ್ ಗಳು ಶುಕ್ರವಾರ ಮೇ. 20 ರಂದು ದೇಶಾದ್ಯಂತ ಮುಷ್ಕರ ಕೈಗೊಳ್ಳಲಿವೆ.
ತನ್ನ ಐದು ಸಹವರ್ತಿ ಬ್ಯಾಂಕ್ಗಳು ಮತ್ತು ಹೊಸದಾಗಿ ಸ್ಥಾಪಿತವಾದ ಭಾರತೀಯ ಮಹಿಳಾ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸಬೇಕು ಎಂಬ ಕೋರಿಕೆಯನ್ನು ಕೇಂದ್ರ ಸರಕಾರದ ಮುಂದೆ ಭಾರತೀಯ ಸ್ಟೇಟ್ ಬ್ಯಾಂಕ್ ಇರಿಸಲು ಯೋಜಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಇದನ್ನು ವಿರೋಧಿಸಿ ಸಾಂಕೇತಿಕವಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಮೇ 20ರಂದು ಮುಷ್ಕರ ನಡೆಸಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎಚ್. ಅರುಣಾಚಲಂ ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು- ಇವುಗಳನ್ನು ತನ್ನೊಳಗೆ ವಿಲೀನ ಮಾಡಬೇಕು. ಅಂತೆಯೇ ಮಹಿಳಾ ಬ್ಯಾಂಕನ್ನೂ ವಿಲೀನಗೊಳಿಸಲು ತಾತ್ವಿಕ ಒಪ್ಪಿಗೆ ನೀಡಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಎಸ್ ಬಿಐ ಇಡಲು ಮುಂದಾಗಿದೆ.
ಶುಕ್ರವಾರ ಮೇ 20 ರಂದು ಮುಷ್ಕರ, ಮೇ 21 ಶನಿವಾರ ಬುದ್ಧ ಪೂರ್ಣಿಮಾ, ಮೇ 22 ಭಾನುವಾರ . ಹೀಗಾಗಿ ಮುಷ್ಕರ ನಡೆಸುತ್ತಿರುವ ಬ್ಯಾಂಕ್ ಗಳಲ್ಲಿ ಮೂರು ದಿನ ಬ್ಯಾಂಕ್ ವಹಿವಾಟುಗಳು ಸ್ಥಗಿತವಾಗುತ್ತದೆ.
Advertisement