ಗುವಾಹಟಿ: ಅಕ್ರಮ ನುಸುಳುವಿಕೆಯನ್ನು ಸಂಪೂರ್ಣ ತಡೆಯುವುದಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ ಬಾಂಗ್ಲಾದೇಶ ಗಡಿ ಬಂದ್ ಮಾಡುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ನಿಯೋಜಿತ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೊವಾಲ್ ಅವರು ಶನಿವಾರ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗಡಿಯನ್ನು ಸಂಪೂರ್ಣವಾಗಿ ಬಂದ್ ಮಾಡಲು ನನಗೆ ಎರಡು ವರ್ಷಗಳ ಕಾಲವಕಾಶ ನೀಡಿದ್ದಾರೆ.. ಅವರು ನೀಡಿದ ಕಾಲಮಿತಿಯೊಳಗೇ ನಾವು ಆ ಕೆಲಸ ಮುಗಿಸುತ್ತೇವೆ ಎಂದು ಸೋನೊವಾಲ್ ಅವರು ಪಿಟಿಐ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆದಷ್ಟು ಬೇಗ ಅಸ್ಸಾಂಗೆ ಹೊಂದಿಕೊಂಡಂತೆ ಇರುವ ಭಾರತ-ಬಾಂಗ್ಲಾ ಗಡಿಯಲ್ಲಿ ಬೇಲಿ ನಿರ್ಮಾಣ ಮಾಡುವ ಕಾರ್ಯ ಮುಗಿಸುತ್ತೇವೆ. ಗಡಿ ಬಂದ್ ಮಾಡಿದರೆ ಅಕ್ರಮ ನುಸುಳುವಿಕೆ ತಾನಾಗಿಯೇ ನಿಲ್ಲುತ್ತದೆ ಎಂದಿದ್ದಾರೆ. ಅಲ್ಲದೆ ಅಕ್ರಮ ನುಸುಳುವಿಕೆ ತಡೆಯುವ ಬಗ್ಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸೋನೊವಾಲ್ ಅವರು ಹೇಳಿದ್ದಾರೆ.
ಇತ್ತೀಚಿಗೆ ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಾಂಗ್ಲಾ ದೇಶಿಗರ ಅಕ್ರಮ ನುಸುಳುವಿಕೆಯನ್ನು ಪ್ರಮುಖ ವಿಷಯವಾಗಿ ತೆಗೆದುಕೊಂಡಿದ್ದು, ಅಲ್ಲದೆ ಅಕ್ರಮ ನುಸುಳುವಿಕೆ ವಿರುದ್ಧ ಕಾಂಗ್ರೆಸ್ ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿತ್ತು.