ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಬಾಂಬ್ ಅಳವಡಿಸಲಾಗಿದೆ ಎಂಬ ಅನಾಮಿಕ ಕರೆಯೊಂದು ದೆಹಲಿಯನ್ನು ಅಕ್ಷರಶಃ ಆತಂಕದಲ್ಲಿ ದೂಡಿತ್ತು.
ಮಧ್ಯಾಹ್ನ ಪ್ರಧಾನಿ ನಿವಾಸ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಬಾಂಬ್ ಅಳವಡಿಸಿರುವುದಾಗಿ ಅನಾಮಿಕನೋರ್ವ ಎನ್ಐಎ ಗೆ ಕರೆ ಮಾಡಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಎನ್ಐಎ ಅಧಿಕಾರಿಗಳು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪ್ರಧಾನಿ ಹಾಗೂ ದೆಹಲಿ ಸಿಎಂ ಅವರ ಮನೆಯನ್ನು ಸುತ್ತುವರೆದಿದ್ದಾರೆ.
ಆದರೆ ಎನ್ಐಎ ಗೆ ಬಂದ ಅನಾಮಿಕ ಕರೆ ಹುಸಿ ಎಂಬುದು ಸಾಬೀತಾಗಿದ್ದು, ಬಳಿಕ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವೇಳೆ ಅನಾಮಿಕ ಕರೆಯ ಜಾಡು ಹಿಡಿದು ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ, ದೆಹಲಿಯ ಸಾಗರ್ಪುರ್ ನಿವಾಸಿಯೋರ್ವನನ್ನು ಬಂಧಿಸಿದ್ದಾರೆ.
ಈತ ಡ್ರಗ್ ವ್ಯಸನಿಯಾಗಿದ್ದು, ದೆಹಲಿ ಪೊಲೀಸ್ ಕಮಿಷನರ್ ಬಿ.ಎಸ್. ಬಸ್ಸಿ ನಂಬರ್ ಬೇಕೆಂದು ಕಂಟ್ರೋಲ್ ರೂಂ ಗೆ ಫೋನ್ ಮಾಡಿದ್ದ. ಆದರೆ ನಂಬರ್ ಸಿಗದೇ ಹೋದಾಗ ಈ ರೀತಿ ಹುಸಿ ಕರೆ ಮಾಡಿ ಆತಂಕ ಸೃಷ್ಟಿಸಿದ್ದ ಎನ್ನಲಾಗಿದೆ. ಸದ್ಯ ಈ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement