ಕೊಚ್ಚಿ: ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವ ಕೇರಳದ ಜಿಶಾ ಕೊಲೆ ಪ್ರಕರಣ ನಡೆದು 25 ದಿನಗಳೇ ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಕೊಲೆ ಪ್ರಕರಣದಲ್ಲಿ ವಲಸೆ ಕೆಲಸಗಾರರು ಭಾಗಿಯಾಗಿರಬಹುದು ಎಂಬ ಶಂಕೆಯಿಂದ ದಾರ್ಜಿಲಿಂಗ್ ಗೆ ಭೇಟಿ ಮಾಡಿದ್ದ ಪೊಲೀಸರ ತಂಡ ಯಾವುದೇ ಸುಳಿವು ಸಿಕ್ಕದೆ ವಾಪಾಸಾಗಿದೆ. ಕೊಲೆ ನಡೆಸಲು ಯಾವುದಾದರೂ ಅಂಶಗಳು ಪ್ರೇರಣೆಯಾಗಿರಬಹುದೇ ಎಂಬುದನ್ನು ಪತ್ತೆಹಚ್ಚಲು ಕೂಡ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ.
ಜಿಶಾ ಕೊಲೆಗೆ ಬಳಸಲಾಗಿದ್ದ ಆಯುಧಗಳನ್ನು ವಶಪಡಿಸಿಕೊಳ್ಳುವಲ್ಲಿ ಕೂಡ ಪೊಲೀಸರು ವಿಫಲರಾಗಿದ್ದಾರೆ. ಜಿಶಾ ಹೋಗುತ್ತಿದ್ದ ಎರ್ನಾಕುಲಂ ಸರ್ಕಾರಿ ಕಾನೂನು ವಿದ್ಯಾಲಯದ ಆಕೆಯ ಸ್ನೇಹಿತರನ್ನು ತನಿಖೆ ನಡೆಸಲು ತನಿಖಾಧಿಕಾರಿಗಳು ಯೋಚಿಸುತ್ತಿದ್ದಾರೆ.
ಆಕೆಯ ಭುಜದ ಮೇಲಿದ್ದ ಎರಡು ಕಚ್ಚಿದ ಗಾಯಗಳ ಸಹಾಯದಿಂದ ವಿಧಿವಿಜ್ಞಾನ ಪ್ರಯೋಗಾಲಯದ ನೆರವಿನಿಂದ ಮೃತದೇಹದ ಡಿಎನ್ಎ ಪರೀಕ್ಷೆ ಮಾಡಲಾಗಿದ್ದು, ಅದರಿಂದಲೂ ಯಾವುದೇ ಸಕಾರಾತ್ಮಕ ಫಲಿತಾಂಶ ಸಿಕ್ಕಿಲ್ಲ.
Advertisement