30 ದಿನಗಳಲ್ಲಿ ಮಕ್ಕಳ ಕಳ್ಳಸಾಗಣೆ ಕೇಸುಗಳ ವಿಚಾರಣೆ ಮುಗಿಯಬೇಕು: ಕೈಲಾಶ್ ಸತ್ಯರ್ಥಿ
ನವದೆಹಲಿ: ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಮತ್ತು ಮಕ್ಕಳ ಜೀತ ಪದ್ಧತಿ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ 30 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ನೊಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೀತ ಕಾರ್ಮಿಕ ಮಕ್ಕಳು ಮತ್ತು ಮಕ್ಕಳ ಕಳ್ಳಸಾಗಣೆ ನಿರ್ಮೂಲನೆಯ ರಾಷ್ಟ್ರೀಯ ಸಮಾಲೋಚನೆಯಲ್ಲಿ ಮಾತನಾಡಿದ ಸತ್ಯರ್ಥಿ, ಮಕ್ಕಳ ಕಳ್ಳಸಾಗಣೆ ವಿರುದ್ಧ ಸರ್ಕಾರ ಯೋಜನಾ ಚೌಕಟ್ಟು ಒದಗಿಸಲು ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ, ಮಕ್ಕಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವಲ್ಲಿ, ರಕ್ಷಣೆ ಮಾಡುವಲ್ಲಿ ಮತ್ತು ಪುನರ್ವಸತಿ ಮಾಡುವಲ್ಲಿ ಭಾರೀ ಅಂತರವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಪರಾಧಿಗಳಿಗೆ ದೂರು ದಾಖಲಿಸಿ, ವಿಚಾರಣೆ ನಡೆದು 30 ದಿನಗಳೊಳಗೆ ಶಿಕ್ಷೆ ನೀಡಬೇಕು. ಮಕ್ಕಳಿಗೆ ಕೂಡ ಪುನರ್ವಸತಿ ಕಲ್ಪಿಸಿ 30 ದಿನಗಳೊಳಗೆ ಕಡ್ಡಾಯವಾಗಿ ಪರಿಹಾರ ನೀಡಬೇಕು ಎಂದು ಹೇಳಿದರು.
ಜಾರಿ ಹಂತದಲ್ಲಿರುವ ಮಕ್ಕಳ ಕಳ್ಳಸಾಗಣೆಗೆ ಸಂಬಂಧಪಟ್ಟ ಹೊಸ ಕಾನೂನಿನಂತೆ ನಿಯಮಗಳನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೆ ತರಲು ಗಟ್ಟಿಯಾದ, ನಿಖರ ಮತ್ತು ಜವಾಬ್ದಾರಿಯುತ ವಿಧಾನ ಅತ್ಯಗತ್ಯ ಎಂದು ಹೇಳಿದರು.
ಮಕ್ಕಳ ಹಕ್ಕುಗಳಿಗಾಗಿ ಕಳೆದ 30 ವರ್ಷಗಳಿಂದ ಹೋರಾಡುತ್ತಿರುವ ಸತ್ಯರ್ಥಿಯವರು ಬಚ್ಪನ್ ಬಚಾವೋ ಆಂದೋಲನ ಸರ್ಕಾರೇತರ ಸಂಘಟನೆ ಮೂಲಕ ದೇಶಾದ್ಯಂತ ಸುಮಾರು 80 ಸಾವಿರ ಜೀತ ಮಕ್ಕಳನ್ನು ರಕ್ಷಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ