ಮುಂಬೈ: ಬಾಲಿವುಡ್ ನ ಖ್ಯಾತ ನಟರಾದ ಅನುಪಮ್ ಖೇರ್ ಮತ್ತು ನಾಸಿರುದ್ದೀನ್ ಶಾ ಅವರ ನಡುವೆ ಟ್ವಿಟ್ಟರ್ ವಾರ್ ನಡೆದಿದೆ.
ಕಾಶ್ಮೀರ ಪಂಡಿತಕ ಪರವಾಗಿ ಅನುಪಮ್ ಖೇರ್ ಅವರು ಪ್ರಚಾರ ಮಾಡುತ್ತಿರುವುದರ ಹಿಂದಿನ ಉದ್ದೇಶವನ್ನು ನಾಸಿರುದ್ದೀನ್ ಶಾ ಪ್ರಶ್ನಿಸಿದ್ದಾರೆ. ಖೇರ್ ವಿರುದ್ಧ ಟ್ವಿಟ್ಟರ್ ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಕಾಶ್ಮೀರದಲ್ಲಿ ಯಾವತ್ತೂ ವಾಸಿಸದೆ ಇದ್ದ ವ್ಯಕ್ತಿಯೊಬ್ಬರು ಕಾಶ್ಮೀರ ಪಂಡಿತರ ಪರವಾಗಿ ಹೋರಾಟ ಆರಂಭಿಸಿದ್ದಾರೆ. ತಕ್ಷಣವೇ ಅವರು ನಿರಾಶ್ರಿತರಾಗಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ನಾಸಿರುದ್ದೀನ್ ಕೆಣಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ಶಾ ಅವರೇ ಎಲ್ಲರಿಗೂ ಜಯಕಾರ. ಆ ತರ್ಕದಿಂದ ಅನಿವಾಸಿ ಭಾರತೀಯರು ಭಾರತದ ಬಗ್ಗೆ ಯೋಚಿಸಲೇಬಾರದು ಎಂಬ ಅರ್ಥ ಬರುತ್ತದೆ ಎಂದು ಬರೆದಿದ್ದಾರೆ.
ತಮಗೆ ನಾಸಿರುದ್ದೀನ್ ಶಾ ಅವರ ಬಗ್ಗೆ ಅಪಾರ ಗೌರವವಿದ್ದು, ಅಂತಹ ಸೂಕ್ಷ್ಮ ಹೇಳಿಕೆಗಳನ್ನು ಅವರಿಂದ ನಿರೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಶಾ ನೀಡಿದ್ದಾರೆಂದು ನನಗನಿಸುವುದಿಲ್ಲ. ಬೇರೆಯವರು ಇವರ ಹೆಸರಿನಲ್ಲಿ ನೀಡಿದ್ದಾರೆ ಎಂದು ಅನಿಸುತ್ತದೆ. ನನ್ನ ಹುಟ್ಟು ಕಾಶ್ಮೀರದಲ್ಲಿ. ನಾನು ಮೂಲತಃ ಕಾಶ್ಮೀರ ಬ್ರಾಹ್ಮಣ ಎಂದು ದೃಢಪಡಿಸಲು ನಾನು ಇಚ್ಛಿಸುವುದಿಲ್ಲ ಎಂದು ಕೂಡ ಅನುಪಮ್ ಖೇರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಟ್ವಿಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ನಾಸಿರುದ್ದೀನ್ ಶಾ, ನಾನು ಆ ರೀತಿ ಹೇಳಿಲ್ಲ. ತಪ್ಪಾಗಿ ವರದಿ ಮಾಡಲಾಗಿದೆ ಎಂದಿದ್ದಾರೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನಂತರ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ನಾನು ನಾಸಿರುದ್ದೀನ್ ಶಾ ಅವರನ್ನು ಸಂಪರ್ಕಿಸಿದ್ದು, ತಾವು ಆ ರೀತಿ ಹೇಳಿಯೇ ಇಲ್ಲ ಎಂದು ಹೇಳಿದ್ದಾರೆ ಎಂದರು.
Advertisement