ನವದೆಹಲಿ: ನಮ್ಮ ಯೋಧರ ಶಿರಚ್ಛೇಧಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನಾ ಶಿಬಿರಗಳ ಮೇಲೆ ದಾಳಿ ಮಾಡದಂತೆ ಪಾಕಿಸ್ತಾನ ಭಾರತಕ್ಕೆ ಮನವಿ ಮಾಡಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.
ಗೋವಾದ ಸಂಖಲಿಮ್ ಗ್ರಾಮದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರು, ಕಳೆದ ರಾತ್ರಿ ಪಾಕಿಸ್ತಾನದಿಂದ ಕರೆ ಬಂದಿದ್ದು, ಪ್ರತೀಕಾರ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಪಾಕಿಸ್ತಾನ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿರುವ ಭಾರತ ಕಳೆದ ಎರಡು ದಿನಗಳಿಂದ ಗಡಿಯಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸಿದೆ ಎಂದು ಹೇಳಿದರು.
ಕಳೆದ ಮಂಗಳವಾರ ಪಾಕ್ ಸೇನೆ ಭಾರತೀಯ ಯೋಧನ ಶಿರಚ್ಛೇಧ ಮಾಡಿತ್ತು. ಇದಾದ ಬಳಿಕ ಭಾರತೀಯ ಸೇನೆ ಪೂಂಚ್, ರಾಜೌರಿ, ಕೇಲ್, ಮಚಿಲ್ ಸೆಕ್ಟರ್ ನಲ್ಲಿ ಪಾಕ್ ಸೇನಾ ಶಿಬಿರಗಳ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿತ್ತು ಎಂದು ಪರಿಕ್ಕರ್ ವಿವರಿಸಿದ್ದಾರೆ.
ದಾಳಿ ನಿಲ್ಲಿಸುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ ಮತ್ತು ನಮಗೂ ಅದರಲ್ಲಿ ಆಸಕ್ತಿ ಇಲ್ಲ. ಆದರೆ ನೀವೂ ಕನದ ವಿರಾಮ ಉಲ್ಲಂಘನೆ ಮತ್ತು ಅಪ್ರಚೋದಿತ ಗುಂಡಿನ ದಾಳಿಯನ್ನು ಮೊದಲು ನಿಲ್ಲಿಸಿ ಎಂದು ಹೇಳಿರುವುದಾಗಿ ಪರಿಕ್ಕರ್ ತಿಳಿಸಿದ್ದಾರೆ.