ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ(ಸಂಗ್ರಹ ಚಿತ್ರ)
ದೇಶ
ಇಂದು ಎಡಿಎಂಕೆ ಸ್ಥಾಪನೆ ದಿನ: ನಿಲ್ಲದ ಜಯಲಲಿತಾ ಆರೋಗ್ಯ ಪರಿಸ್ಥಿತಿ ಕುರಿತ ಸಂಶಯ
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಕೆ) ಪಕ್ಷ ಸ್ಥಾಪನೆಗೊಂಡು ಸೋಮವಾರಕ್ಕೆ 44...
ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಕೆ) ಪಕ್ಷ ಸ್ಥಾಪನೆಗೊಂಡು ಸೋಮವಾರಕ್ಕೆ 44 ವರ್ಷ ಮುಕ್ತಾಯವಾಗಿ 45ನೇ ವರ್ಷಕ್ಕೆ ಕಾಲಿಡುತ್ತಿದೆ.
ಪಕ್ಷದ ಮುಖ್ಯಸ್ಥೆಯಾಗಿ 27 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ ಪಕ್ಷದ ಸ್ಥಾಪಕ ಎಂ.ಜಿ.ರಾಮಚಂದ್ರನ್ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಪಕ್ಷದ ಧ್ವಜವನ್ನು ಜಯಲಲಿತಾ ಅವರು ಹಾರಿಸದಿರುವುದು ಬಹುಶಃ ಇದೇ ಮೊದಲ ಬಾರಿಗೆ ಇರಬೇಕು.
ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಕಳೆದ ತಿಂಗಳು 22ರಂದು ಆಸ್ಪತ್ರೆಗೆ ದಾಖಲಾದ ತಮಿಳು ನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಇನ್ನೂ ಬಿಡುಗಡೆಯಾಗಿಲ್ಲ. ಪಕ್ಷದ ಸ್ಥಾಪನ ದಿನಾಚರೆಣೆಗೆ ಜಯಲಲಿತಾ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಎಡಿಎಂಕೆ ಹೇಳುತ್ತಿದೆ.ಅವರ ಅನುಪಸ್ಥಿತಿಯಲ್ಲಿ ಪಕ್ಷದ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮಧುಸೂದನ ಅವರು ಇಂದು ಎಡಿಎಂಕೆಯ ಕೇಂದ್ರ ಕಚೇರಿಯಲ್ಲಿ ಎಂಜಿ ಆರ್ ಮೂರ್ತಿಗೆ ಗೌರವ ಸಲ್ಲಿಸಲಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗೆಗಿನ ಸಂಶಯ, ಊಹಾಪೋಹಗಳು ಮುಂದುವರಿದಿವೆ. ಕಳೆದ ಆರು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಬಗ್ಗೆ ಆಸ್ಪತ್ರೆಯಿಂದಲೂ ಯಾವುದೇ ಸುದ್ದಿ ಬಂದಿಲ್ಲ. ಅಕ್ಟೋಬರ್ 10ರಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಪೋಲೋ ಆಸ್ಪತ್ರೆ, ಜಯಲಲಿತಾ ಅವರನ್ನು ತೀವ್ರ ನಿಗಾ ಘಟಕದಲ್ಲಿ ಮತ್ತು ಆಪ್ತ ಸಲಹೆಗಾರರಡಿ ತಪಾಸಣೆ, ಆರೋಗ್ಯ ವಿಚಾರಣೆ ನಡೆಯುತ್ತಿದೆ. ಅವರಿಗೆ ಉಸಿರಾಟದ ನೆರವು, ಪ್ರತಿಜೀವಕಗಳು, ಪೋಷಣೆ, ಚಿಕಿತ್ಸೆ ಮತ್ತು ನಿಷ್ಕ್ರಿಯ ಭೌತಚಿಕಿತ್ಸೆಯ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ