ಇಂದೋರ್: ವಿದೇಶಾಂಗ ಇಲಾಖೆಯ ಕಾರ್ಯವೈಖರಿ ಬದಲಾಗುತ್ತಿದ್ದು, ಕೇವಲ ರಾಜತಾಂತ್ರಿಕ ವಿಷಯಗಳಿಗೆ ಮಾತ್ರ ಸೀಮಿತವಾಗದೇ ರಾಷ್ಟ್ರದ ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಇಂದೋರ್ ನಲ್ಲಿ ಎರಡು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ವಿದೇಶಾಂಗ ಸಚಿವಾಲಯದ ಕಾರ್ಯವಿಧಾನ ಮತ್ತಷ್ಟು ಪರಿಷ್ಕೃತಗೊಂಡಿರುವುದರಿಂದ ಭಾರತಕ್ಕೆ ಹರಿದುಬರುತ್ತಿರುವ ವಿದೇಶಿ ಬಂಡವಾಳ ಹೂಡಿಕೆ ಏರಿಕೆಯ ಶೇ.53 ರಷ್ಟರಲ್ಲಿ ವಿದೇಶಾಂಗ ಇಲಾಖೆಯ ಕೊಡುಗೆಯು ಇದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಇದೆ ಮೊದಲ ಬಾರಿಗೆ ವಿದೇಶಾಂಗ ಸಚಿವಾಲಯ ರಾಷ್ಟ್ರದ ಅಭಿವೃದ್ಧಿಯತ್ತಲೂ ಗಮನ ಹರಿಸಿದೆ. ದೇಶಿಯ ಅಭಿವೃದ್ಧಿ ಈ ಹಿಂದೆ ವಿದೇಶಾಂಗ ಸಚಿವಾಲಯದ ಕಾರ್ಯಸೂಚಿಯಲ್ಲಿ ಇರಲಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಈ ಹಿಂದೆ ವಿದೇಶಾಂಗ ಸಚಿವಾಲಯ ಕೇವಲ ರಾಜತಾಂತ್ರಿಕ ವಿಷಯಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿತ್ತು. ಆದರೆ ಈಗ ರಾಜತಾಂತ್ರಿಕ ವಿಷಯಗಳೊಂದಿಗೆ ಆರ್ಥಿಕ ಬಲವರ್ಧನೆಯತ್ತಲೂ ವಿದೇಶಾಂಗ ಇಲಾಖೆ ಗಮನ ಹರಿಸುತ್ತಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
Advertisement