ದೇಶ
ಸೇನಾ ಕಲ್ಯಾಣ ನಿಧಿಗೆ ಚಿತ್ರ ನಿರ್ಮಾಪಕರಿಂದ 5 ಕೋಟಿ ದೇಣಿಗೆಗೆ ಮಹಾ ಸಿಎಂ ವಿರೋಧ
ಪಾಕಿಸ್ತಾನಿ ನಟ ಅಭಿನಯದ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಬಿಡುಗಡೆಗೆ ನಿರ್ಮಾಪಕರು 5 ಕೋಟಿ ರುಪಾಯಿ ದೇಣಿಗೆಯನ್ನು...
ಮುಂಬೈ: ಪಾಕಿಸ್ತಾನಿ ನಟ ಅಭಿನಯದ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಬಿಡುಗಡೆಗೆ ನಿರ್ಮಾಪಕರು 5 ಕೋಟಿ ರುಪಾಯಿ ದೇಣಿಗೆಯನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡಬೇಕು ಎಂಬ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಬೇಡಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪಾಕ್ ನಟ ಫಾವದ್ ಖಾನ್ ಅಭಿನಯದ ಕರಣ್ ಜೋಹರ್ ಅವರ ಚಿತ್ರ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆಗೆ ಎಂಎನ್ಎಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವಾರ ಮಹಾ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಚಿತ್ರ ನಿರ್ಮಾಪಕರು ಸೇನಾ ಕಲ್ಯಾಣ ನಿಧಿಗೆ 5 ಕೋಟಿ ರುಪಾಯಿ ದೇಣಿಗೆ ನೀಡುವಂತೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ತಾವು ವಿರೋಧಿಸಿರುವುದಾಗಿ ಫಡ್ನವಿಸ್ ತಿಳಿಸಿದ್ದಾರೆ.
ರಾಜ್ ಠಾಕ್ರೆ ಅವರು ಒಟ್ಟು ಮೂರು ಬೇಡಿಕೆಗಳನ್ನು ಇಟ್ಟಿದ್ದರು. ಆ ಪೈಕಿ ಎರಡು ಬೇಡಿಕೆಗೆ ಯಾವುದೇ ಆಕ್ಷೇಪ ವ್ಯಕ್ತವಾಗಲಿಲ್ಲ. ಆದರೆ 5 ಕೋಟಿ ರುಪಾಯಿ ದೇಣಿಗೆ ವಿಷಯ ಬಂದಾಗ ನಾನು ಮಧ್ಯಪ್ರವೇಶಿಸಿ, ಚಿತ್ರ ನಿರ್ಮಾಪಕರು ಇದಕ್ಕೆ ಒಪ್ಪಿಕೊಳ್ಳಬೇಕಾಗಿಲ್ಲ. ದೇಣಿಗೆ ಸ್ವಯಂ ಪ್ರೇರಿತವಾಗಿರಬೇಕು. ಇದನ್ನು ನಿರ್ಮಾಪಕರು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಾಗಿಲ್ಲ ಎಂದು ತಾವು ಸ್ಪಷ್ಟಪಡಿಸಿರುವುದಾಗಿ ಮಹಾ ಸಿಎಂ ಹೇಳಿದ್ದಾರೆ.
ಸಿಯಾಚಿನ್ ನೀರ್ಗಲ್ಲಿನಲ್ಲಿ ಹಿಮಪಾತಕ್ಕೆ ಸಿಲುಕಿ 10 ಯೋಧರು ಮೃತಪಟ್ಟ ಘಟನೆ ನಡೆದ ನಂತರ ಯುದ್ಧದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಸೈನಿಕರಿಗೆ ನೆರವು ನೀಡುವ ಸಲುವಾಗಿ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಬೇಡಿಕೆ ಕೇಳಿ ಬಂದಿತ್ತು. ಸೇನೆಗೆ ಜನರ ಕರೆಗೆ ಓಗೊಟ್ಟು ಕಲ್ಯಾಣ ನಿಧಿ ಸ್ಥಾಪಿಸಿದೆ. ಇಲ್ಲಿ ಸಂಗ್ರಹವಾಗುವ ದೇಣಿಗೆ ಮತ್ತು ವಿವಿಧ ಯೋಜನೆಗಳಿಂದ ಸಂಗ್ರಹವಾಗುವ ಹಣವನ್ನು ಕರ್ತವ್ಯದಲ್ಲಿರುವಾಗ ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಕುಟುಂಬಸ್ಥರಿಗೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.