ಲಖನೌ: ಜೈಲಿನಿಂದ ಪರಾರಿಯಾದ ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಉತ್ತರ ಪ್ರದೇಶ ಮಾಜಿ ಸಿಎಂ, ಬಿಎಸ್ ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
ಉಗ್ರರು ಜೈಲಿನಿಂದ ಪರಾರಿಯಾಗಿರುವುದು ಹಾಗೂ ಎನ್ ಕೌಂಟರ್ ನಡೆದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ವಿರೋಧಾತ್ಮಕ ಹೇಳಿಕೆಗಳು ಹೊರಬರುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ನಿಶಸ್ತ್ರರಾಗಿದ್ದ ಉಗ್ರರು ಶರಣಾಗತಿಗೆ ಸಿದ್ಧರಿದ್ದ ಹೊರತಾಗಿಯೂ ಅವರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಪ್ರಕರಣ ಸಾಕಷ್ಟು ಗೊಂದಲಗಳಿಂದ ಕೂಡಿದ್ದು, ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆ ನಡೆಸುವುದು ಸೂಕ್ತ ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ. ಭೋಪಾಲ್ ನಲ್ಲಿ ನಡೆದ ಎನ್ ಕೌಂಟರ್ ಬಗ್ಗೆ ಈಗಾಗಲೇ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಸಹ ಅನುಮಾನ ವ್ಯಕ್ತಪಡಿಸಿದ್ದು, ಎನ್ ಕೌಂಟರ್ ನ್ನು ಪ್ರಶ್ನಿಸಿವೆ.
Advertisement