ನವದೆಹಲಿ: 2002 ರ ಗುಜರಾತ್ ಗಲಭೆ ನಂತರ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರ ನಡುವಿನ ಪತ್ರದ ಸಂಭಾಷಣೆಯನ್ನು ಬಹಿರಂಗ ಪಡಿಸಬೇಕೆಂದು ಆರ್ ಟಿಐ ಕಾರ್ಯಕರ್ತ ಸುಭಾಷ್ ಅಗರ್ ವಾಲ್ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೀಫ್ ಇನ್ ಪಾರ್ಮೇಷನ್ ಕಮಿಷನರ್ ಪ್ರಧಾನಿ ಮಂತ್ರಿ ಕಾರ್ಯಾಲಯಕ್ಕೆ ನೋಟಿಸ್ ನೀಡಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 2 ಮತ್ತು 19(4) ರ ಪ್ರಕಾರ ಮೂರನೇ ವ್ಯಕ್ತಿ ಕೇಳಿದ ಮಾಹಿತಿಯನ್ನು ಇಲಾಖೆ ನೀಡಬೇಕು ಎಂದು ದೆಹಲಿ ಹೈ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮುಖ್ಯ ಮಾಹಿತಿ ಆಯುಕ್ತ ರಾಧಾಕೃಷ್ಣ ಮಥೂರ್ ಪ್ರಧಾನಿ ಮಂತ್ರಿ ಕಾರ್ಯಾಲಯಕ್ಕೆ ನೋಟಿಸ್ ನೀಡಿದ್ದಾರೆ.
2002 ರ ಫೆಬ್ರವರಿ 30 ರಂದು ಗುಜರಾತ್ ಸರ್ಕಾರ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ನಡುವೆ ನಡೆದ ಮಾತುಕತೆಯ ವಿವರವನ್ನು ಬಹಿರಂಗ ಪಡಿಸಬೇಕು ಎಂದು 2013 ಡಿಸೆಂಬರ್ 16 ರಂದು ಅಗರ್ ವಾಲ್ ಪ್ರದಾನಿ ಕಾರ್ಯಾಲಯವನ್ನು ಕೋರಿದ್ದರು, ಆದರೆ ಮಾಹಿತಿ ನೀಡಲು ಪ್ರಧಾನ ಮಂತ್ರಿ ಕಚೇರಿ ನಿರಾಕರಿಸಿತ್ತು.
ವಿವರ ನೀಡಿದರೇ ನಡೆಯುತ್ತಿರುವ ಕಾನೂನು ಪ್ರಕ್ರಿಯೆ ಮತ್ತ ಗಲಭೆ ಪ್ರಕರಣಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿತ್ತು.
ಜಾತಿ, ಮತ, ಧರ್ಮದ ಆಧಾರದ ಮೇಲೆ ಪಕ್ಷಪಾತ ಮಾಡುವುದು ಬೇಡ, ಗಲಭೆ ಸಂತ್ರಸ್ತರ ಬಗ್ಗೆ ಉತ್ತಮ ಕಾಳಜಿ ವಹಿಸಿ, ರಾಜಧರ್ಮವನ್ನು ಪಾಲಿಸುವಂತೆ ಅಟಲ್ ಬಿಹಾರಿ ವಾಜಪೇಯಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಸಲಹೆ ನೀಡಿದ್ದರು ಎನ್ನಲಾಗಿದೆ.
Advertisement