ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ತಮಿಳು ನಾಡಿಗೆ ಕೃಷಿ ಚಟುವಟಿಕೆಗೆ 10 ದಿನಗಳ ಕಾಲ ಕಾವೇರಿ ನೀರು ಬಿಡುಗಡೆ ಮಾಡಲು ಆರಂಭಿಸಿತ್ತು. ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ವ್ಯಾಪಕ ಹೋರಾಟ ನಡೆಸುತ್ತಿದ್ದವು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಹೊಸೂರು-ಬೆಂಗಳೂರು ರಸ್ತೆಯಲ್ಲಿ ತಮಿಳು ನಾಡು ಬಸ್ಸುಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ತಮಿಳು ನಾಡು ದಾಖಲಾತಿ ಹೊಂದಿರುವ ಟ್ರಕ್ಸ್, ಕಾರು, ದ್ವಿಚಕ್ರ ವಾಹನಗಳನ್ನು ಕೂಡ ಕೃಷ್ಣಗಿರಿ ಗೇಟ್, ಶೂಲಗಿರಿ ಮತ್ತು ಅತ್ತಿಬೆಲೆ ಗಡಿಯಲ್ಲಿ ನಿಲ್ಲಿಸಲಾಗುತ್ತಿತ್ತು. ಅಗತ್ಯ ವಸ್ತುಗಳಾದ ಹಾಲು, ಪೆಟ್ರೋಲ್ ಮೊದಲಾದವುಗಳನ್ನು ಹೊತ್ತ ವಾಹನಗಳನ್ನು ಮಾತ್ರ ಬಿಡಲಾಗುತ್ತಿತ್ತು.