ನವದೆಹಲಿ: ಜಾಗತಿಕ ಭಯೋತ್ಪಾದಕ ಎಂಬ ಕುಖ್ಯಾತಿ ಪಡೆದಿರುವ ದಾವೂದ್ ಇಬ್ರಾಹಿಂ ಗೆ ಆತನ ಸಹಚರ 40 ಕೋಟಿ ರೂ ಹಣ ವಂಚಿಸಿ ಪರಾರಿಯಾಗಿದ್ದಾನೆ.
ಖಾಲಿಗ್ ಅಹ್ಮದ್ ಎಂಬಾತ ದಾವೂದ್ ಗೆ ಸೇರಬೇಕಿದ್ದ 40 ಕೋಟಿ ರೂ. ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ.ದೆಹಲಿ ಮೂಲದ ವ್ಯಕ್ತಿಯೊಬ್ಬನಿಂದ 45 ಕೋಟಿ ರೂ ಹಣ ಪಡೆದು, ಅದರಲ್ಲಿ 5 ಕೋಟಿ ಹಣವನ್ನು ತನಗಾಗಿ ಪಡೆದು, ಉಳಿದ 40 ಕೋಟಿ ಹಣವನ್ನು ಹವಾಲಾ ಚಾನೆಲ್ಸ್ ಮೂಲಕ ದಾವೂದ್ ವಿದೇಶಕ್ಕೆ ರವಾನಿಸಬೇಕಿತ್ತು. ಆದರೆ ಖಾಲಿಗ್ ದಾವೂದ್ ಇಬ್ರಾಹಿಂ ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಪಾಕಿಸ್ತಾನದಲ್ಲಿರುವ ದಾವೂದ್ ಮತ್ತೊಬ್ಬ ಸಹಚರ ಜಬೀರ್ ಮೋತಿ ಮತ್ತು ಖಾಲಿಗ್ ಅಹ್ಮದ್ ನಡುವೆ ನಡೆದಿರುವ ಸಂಭಾಷಣೆ ಬಗ್ಗೆ ಭಾರತೀಯ ಗುಪ್ತಚರ ಇಲಾಖೆಗೆ ಮಾಹಿತಿ ದೊರೆತಿದೆ ಎನ್ನಲಾಗಿದೆ.
ಹಣದೊಂದಿಗೆ ಪರಾರಿಯಾಗಿರುವ ಖಾಲಿಗ್ ನನ್ನು ಪತ್ತೆ ಹಚ್ಚಲು ದಾವೂದ್ ಇಬ್ರಾಹಿಂ ನ ಡಿ ಕಂಪನಿ ತನಿಖೆ ಆರಂಭಿಸಿದೆ. ಖಾಲಿಗ್ ಸದ್ಯ ಮಣಿಪುರದಲ್ಲಿ ಅಡಗಿ ಕುಳಿತ್ತಿದ್ದಾನೆಂದು ಹೇಳಲಾಗಿದೆ.
ದಾವೂದ್ ಗೆ ಸೇರ ಬೇಕಿದ್ದ ಈ ಹಣದಲ್ಲಿ 20 ಕೋಟಿ ಹಣವನ್ನು ಪನಾಮಾ ಬ್ಯಾಂಕ್ ಗೆ ನೀಡಬೇಕಿತ್ತು. ಇನ್ನುಳಿದ 20 ಕೋಟಿ ಹಣವನ್ನು ದಾವೂದ್ ವಿದೇಶದಲ್ಲಿ ಬಂಡವಾಳ ಹೂಡಲು ನಿರ್ಧರಿಸಿದ್ದ ಎನ್ನಲಾಗಿದೆ.
ದಾವೂದ್ ನ ಪತ್ತೇದಾರಿ ಬಂಟರು ಖಾಲಿಗ್ ನನ್ನು ದೆಹಲಿ ಮತ್ತು ಕೆನಡಾ ದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
Advertisement