ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಹಾಗೂ ಮಂಡಳಿಯ ಸಹ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಸೌಂದರ್ಯ ರಜನಿಕಾಂತ್ ಅವರು ಪ್ರಾಣಿ ದಯಾ ಮಂಡಳಿ ಸಹ ಸದಸ್ಯರಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದು ಭಾರತೀಯ ಪ್ರಾಣಿ ದಯಾ ಮಂಡಳಿಯ ಉಪಾಧ್ಯಕ್ಷ ಎಸ್. ಚಿನ್ನೆಕೃಷ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಸೌಂದರ್ಯ ಅವರು ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು ಆನಿಮೇಷನ್ ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಅವರಿಂದ ಪ್ರಾಣಿ ದಯಾ ಮಂಡಳಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಸಿನಿಮಾಗಳಲ್ಲಿ ಬಳಸುವ ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸಲಿದ್ದಾರೆ ಎಂದು ಚಿನ್ನೆಕೃಷ್ಣ ಅವರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಭಾರತೀಯ ಪ್ರಾಣಿ ದಯಾ ಮಂಡಳಿ,ಪರಿಸರ ಮತ್ತು ಅರಣ್ಯ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ.