ವರಂಗಲ್: ವರಂಗಲ್ ನ ವಾಗ್ದೇವಿ ಎಂಜಿನಿಯರಿಂಗ್ ಕಾಲೇಜಿನ ಆರು ವಿದ್ಯಾರ್ಥಿಗಳು ಧರ್ಮಸಾಗರ್ ಜಲಾಶಯ ವೀಕ್ಷಣೆಗೆ ತೆರಳಿದ್ದು ಸೆಲ್ಫಿ ತೆಗೆದುಕೊಳ್ಳುವಾಗ ಐವರು ವಿದ್ಯಾರ್ಥಿಗಳು ಕಾಲು ಜಾರಿ ಜಲಾಶಯಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಸೆಲ್ಫಿ ತೆಗೆದುಕೊಳ್ಳುವ ಆತುರದಲ್ಲಿ ಶ್ರಾವ್ಯಾರೆಡ್ಡಿ, ಶಿವಸಾಯಿ, ಶಿವ ಸಾಯಿಕೃಷ್ಣ, ವಿನೂತ್ನ, ಸಾಗರ್ ಜಲಾಶಯಕ್ಕೆ ಬಿದ್ದಿದ್ದಾರೆ. ಆದರೆ ಇವರೊಂದಿಗೆ ತೆರಳಿದ್ದ ರಮ್ಯ ಪ್ರತ್ಯೂಷ ಮಾತ್ರ ಸ್ವಲ್ಪ ದೂರದಲ್ಲಿ ನಿಂತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಹಪಾಠಿಗಳು ಜಲಾಶಯಕ್ಕೆ ಬೀಳುತ್ತಿದ್ದಂತೆ ರಮ್ಯ ಪ್ರತ್ಯೂಷ ಜೋರಾಗಿ ಕೂಗಿಕೊಂಡಿದ್ದಾಳೆ. ಈ ವೇಳೆ ಅಲ್ಲೆ ಗದ್ದೆಗಳಿಗೆ ನೀರು ಕಟ್ಟುತ್ತಿದ್ದ ರೈತರು ಜಲಾಶಯದ ಬಳಿಗೆ ಬರುವಷ್ಟರಲ್ಲಿ ಐವರು ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಇದರಲ್ಲಿ ಇಬ್ಬರು ವಿದ್ಯಾರ್ಥಿನಿಗಳ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಇನ್ನು ಮೂರು ಮಂದಿ ವಿದ್ಯಾರ್ಥಿಗಳ ಮೃತದೇಹಕ್ಕಾಗಿ ಪೊಲೀಸರು ಈಜುಗಾರರೊಂದಿಗೆ ಸೇರಿ ಹುಡುಕಾಟ ನಡೆಸಿದ್ದಾರೆ.