ಜಯಲಲಿತಾ ಆರೋಗ್ಯದ ವದಂತಿಗಳಿಗೆ ತೆರೆ ಎಳೆಯಿರಿ: ಕರುಣಾನಿಧಿ ಒತ್ತಾಯ

ಎಐಡಿಎಂಕೆ ವರಿಷ್ಠೆ, ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ...
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಮಾಜಿ ಮುಖ್ಯಮಂತ್ರಿ ಕರುಣಾನಿಧಿ (ಸಂಗ್ರಹ ಚಿತ್ರ)
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಮಾಜಿ ಮುಖ್ಯಮಂತ್ರಿ ಕರುಣಾನಿಧಿ (ಸಂಗ್ರಹ ಚಿತ್ರ)
ಚೆನ್ನೈ: ಎಐಡಿಎಂಕೆ ವರಿಷ್ಠೆ, ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ತೆರೆ ಎಳೆಯುವಂತೆ ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜ್ವರದ ಸಮಸ್ಯೆಯಿಂದ ವಾರದ ಹಿಂದೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಜಯಲಲಿತಾ ಅವರು ಶೀಘ್ರ ಗುಣಮುಖ ಹೊಂದಲಿ ಎಂದು ಹಾರೈಸಿರುವ ಕರುಣಾನಿಧಿಯವರು ಅವರ ಆರೋಗ್ಯದ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ನೀಡಲಿ ಎಂದು ಹೇಳಿದ್ದಾರೆ.
''ನಾನು ಜಯಲಲಿತಾ ಅವರ ತತ್ವ, ಅಭಿಪ್ರಾಯಗಳನ್ನು ವಿರೋಧಿಸುತ್ತಿದ್ದರೂ ಅವರು ಶೀಘ್ರವೇ ಗುಣಮುಖರಾಗಿ ಎಂದಿನಂತೆ ಕಚೇರಿ ಕರ್ತವ್ಯಕ್ಕೆ ಹಾಜರಾಗಲಿ ಎಂದು ಆಶಿಸುತ್ತೇನೆ'' ಎಂದು ಹೇಳಿದ್ದಾರೆ.
ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೋಲೋ ಆಸ್ಪತ್ರೆ ಅವರ ಆರೋಗ್ಯದ ಬಗ್ಗೆ ಸುದ್ದಿ ನೀಡುತ್ತಿದ್ದರೂ ಕೂಡ ಕೆಲವು ಅನಪೇಕ್ಷಿತ ವದಂತಿಗಳು ಹಬ್ಬುತ್ತಿದ್ದು, ಉದ್ದೇಶಪೂರ್ವಕವಾಗಿ ಕೆಲವರು ಇದನ್ನು ಹಬ್ಬಿಸುತ್ತಿದ್ದಾರೆ ಎಂದರು.
''ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಮ್ಮನೆ ವದಂತಿ ಹರಡುತ್ತಿದ್ದಾರೆ. ಆದುದರಿಂದ ಮುಖ್ಯಮಂತ್ರಿಯವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಜನತೆಗೆ ಗೊತ್ತಾಗಲು ಸರ್ಕಾರ ವಿಷಯ ತಿಳಿಸಬೇಕು. ಮುಖ್ಯಮಂತ್ರಿಯವರು ಆಸ್ಪತ್ರೆಯಲ್ಲಿರುವ ಭಾವಚಿತ್ರ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಕರುಣಾನಿಧಿ ಹೇಳಿದ್ದಾರೆ.
ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ತೀವ್ರ ಜ್ವರ ಮತ್ತು ಡಿ ಹೈಡ್ರೇಷನ್ ಗೆ ಬಾಧೆಗೆ ಒಳಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರಿಗೆ ಕೆಲ ದಿನಗಳವರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com