ಲಕ್ನೋ: ಹೆಚ್ಚುತ್ತಿರುವ ಅಪರಾಧ ಪ್ರಮಾಣವನ್ನು ತಗ್ಗಿಸಲು ಮುಂದಾಗಿರುವ ಉತ್ತರ ಪ್ರದೇಶ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಹಲವು ಅಪರಾಧ ಪ್ರಕರಣಗಳಲ್ಲಿ ಆ್ಯಸಿಡ್ ಬಳಕೆಯಾಗುತ್ತಿರುವುದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಸಂಬಂಧ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೂ ಸುತ್ತೊಲೆ ಹೊರಡಿಸಿದೆ.
ಆ್ಯಸಿಡ್ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿಗೆ ತರಬೇಕೆಂದು ಸರ್ಕಾರ ಸೂಚಿಸಿದೆ. 2014ರ ಹತೋಟಿ ಮತ್ತು ಮಾರಾಟ ಕಾಯ್ದೆಯಂತೆ ಹೊಸ ನೀತಿ ಜಾರಿಗೆ ಬರಲಿದೆ.
ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಭಾನುವಾರ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೂ ಸುತ್ತೊಲೆ ಹೊರಡಿಸಿದ್ದು 15 ದಿನಗಳೊಳಗಾಗಿ ಹೊಸ ನಿಯಮ ಜಾರಿಗೊಳಿಸುವಂತೆ ತಿಳಿಸಿದ್ದಾರೆ.
ಆ್ಯಸಿಡ್ ಮಾರಾಟ ಮಾಡಲು ಪರವಾನಗಿ ಪಡೆದಿರುವ ಪ್ರತಿಯೊಬ್ಬ ವ್ಯಾಪಾರಿಯು ಮಾರಾಟದ ದಾಖಲೆ ಹಾಗೂ ಖರೀದಿಸಿದವರ ವಿಳಾಸ ಮತ್ತು ಖರೀದಿಸಿದ ಪ್ರಮಾಣದ ಮಾಹಿತಿಯನ್ನು ನಮೂದಿಸಬೇಕು ಎಂದು ಆದೇಶಿಸಿಸಲಾಗಿದೆ.