ಛಂಡಿಗಡ: ಈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಭೇಟಿ ನೀಡುತ್ತಿರುವ ಕೆನಡಾ ರಕ್ಷಣಾ ಸಚಿವ ಹರ್ಜಿತ್ ಸಜ್ಜನ್ ಖಾಲಿಸ್ತಾನಿ ಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ, ಹೀಗಾಗಿ ಅವರನ್ನು ಭೇಟಿ ಮಾಡುವುದಿಲ್ಲ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಖಾಸಗಿ ಚಾನೆಲ್ ವೊಂದರ ಕಾರ್ಯಕ್ರಮದಲ್ಲಿ ಮಾತಾನಾಡಿದ ಪಂಜಾಬ್ ಸಿಎಂ. ಹರ್ಜಿತ್ ಸಜ್ಜನ್ ಮತ್ತು ಆತನ ತಂದೆ ಕೂಡ ಖಾಲಿಸ್ತಾನಿಗಳ ಬಗ್ಗೆ ಅನುಕಂಪ ಉಳ್ಳವರು, ಜಸ್ಟೀನ್ ತ್ರುಡೇವ್ ಸರ್ಕಾರದಲ್ಲಿರುವ ಐವರು ಸಚಿವರು ಖಾಲಿಸ್ತಾನಿ ಸಿಂಪಥೈಸರ್ ಆಗಿದ್ದಾರೆ, ಹೀಗಾಗಿ ಅವರು ಯಾರನ್ನು ನಾನು ಭೇಟಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಗೋಮಾಂಸ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರಿಗೆ ತಮಗೆ ಇಷ್ಟವಾಗುವ ಆಹಾರ ತಿನ್ನುವ ಹಕ್ಕಿದೆ, ಹೀಗಾಗಿ ಅವರಿಗೆ ಏನು ಬೇಕೋ ಅದನ್ನು ತಿನ್ನಲು ಬಿಡಬೇಕು ಎಂದು ಹೇಳಿರುವ ಅವರು, ಪಾಕ್ ಕಲಾವಿದರಿಗೆ ನಿಷೇಧ ಹೇರುವುದನ್ನು ನಾನು ವಿರೋಧಿಸುತ್ತೇನೆ ಎಂದು ತಿಳಿಸಿದ್ದಾರೆ.
ಪಾಕ್ ಕಲಾವಿದರನ್ನು ಪಂಜಾಬ್ ಗೆ ಆಹ್ವಾನಿಸಲು ನನಗೆ ಖುಷಿಯಾಗುತ್ತದೆ, ಜೊತೆಗೆ ಮತ್ತೆ ಪಾಕಿಸ್ತಾನಕ್ಕೆ ಭೇಟಿ ನೀಡಲು ನನಗೆ ಬಹಳ ಪ್ರೀತಿ ಎಂದು ಹೇಳಿದ್ದಾರೆ.