ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ವಿಐಪಿ ಸಂಸ್ಕೃತಿಯ ವಿರುದ್ಧದ ಕ್ರಮವಾಗಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇದರ ಅಂಗವಾಗಿ, ಶಿಲಾನ್ಯಾಸ ಹಾಗೂ ಉದ್ಘಾಟನಾ ಫಲಕಗಳಲ್ಲಿ ಸಚಿವರು, ಶಾಸಕರ ಹೆಸರು ಹಾಕುವುದನ್ನು ನಿಷೇಧಿಸಿದ್ದಾರೆ.
ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಹೆಸರನ್ನು ಯಾವುದೇ ಯೋಜನೆ, ಕಾರ್ಯಕ್ರಮಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಫಲಕಗಳಲ್ಲಿ ಹಾಕದಂತೆ ಸೂಚಿಸಲಾಗಿದೆ.
ವಿಐಪಿಗಳು ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇತ್ತೀಚೆಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಇತರೆ ಪ್ರಯಾಣಿಕರೊಂದಿಗೆ ಸಾಲಿನಲ್ಲಿ ನಿಂತು ಒಳ ಸಿಎಂ ಪ್ರವೇಶಿಸಿದ್ದರು.
ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಕಾರಿನ ಮೇಲಿನ ಕೆಂಪು ದೀಪಗಳನ್ನು ಅಮರಿಂದರ್ ಸಿಂಗ್ ತೆಗೆದಿದ್ದು, ಸಂಪುಟದ ಸಚಿವರೂ ಇದೇ ಕ್ರಮ ಕೈಗೊಂಡಿದ್ದಾರೆ.