8ನೇ ತರಗತಿವರಗೆ 'ನೋ-ಡಿಟೆನ್ಶನ್ ಪಾಲಿಸಿ' ಕೈಬಿಡಲು ಕೇಂದ್ರ ಸಂಪುಟ ಒಪ್ಪಿಗೆ

8ನೇ ತರಗತಿಯವರೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ತಡೆರಹಿತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: 8ನೇ  ತರಗತಿಯವರೆಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ತಡೆರಹಿತ ನಿಯಮವನ್ನು(no detention policy) ತೆಗೆದುಹಾಕಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ ದೇಶದಲ್ಲಿ 20 ವಿಶ್ವದರ್ಜೆ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಲು  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಒಪ್ಪಿಗೆ ನೀಡಿದೆ.
8ನೇ ತರಗತಿಯವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕುಗಳ ತಿದ್ದುಪಡಿ ಮಸೂದೆಯಡಿ, ಸಾಧ್ಯತಾ ನಿಯಮವನ್ನು ತರಲಾಗಿದ್ದು, ಅದರಂತೆ ವಿದ್ಯಾರ್ಥಿಗಳು 5 ಮತ್ತು 8ನೇ ತರಗತಿಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ ಅವರನ್ನು ಮುಂದಿನ ತರಗತಿಗೆ ಕಳುಹಿಸದೆ ತಡೆಹಿಡಿಯಲು ರಾಜ್ಯ ಸರ್ಕಾರಗಳಿಗೆ ಇನ್ನು ಮುಂದೆ ಅವಕಾಶವಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳನ್ನು 8 ನೇ ತರಗತಿಯವರೆಗೆ ತೇರ್ಗಡೆ ಮಾಡಬೇಕು ಎಂಬ ನಿಯಮ ತರಲಾಗಿತ್ತು. ಆದರೆ ಇನ್ನು ಮುಂದೆ ಆ ಅವಕಾಶ ಇರುವುದಿಲ್ಲ. ಆದರೂ ಕೂಡ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಮೊದಲು ಅವರಿಗೆ ಇನ್ನೊಂದು ಪರೀಕ್ಷೆ ನೀಡಿ ತೇರ್ಗಡೆಗೆ ಅವಕಾಶ ಕೊಡಲಾಗುತ್ತದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ಅನುಮೋದನೆಗೆ ಮಂಡಿಸಲಾಗುತ್ತದೆ.
ಪ್ರಸ್ತುತದ ಶಿಕ್ಷಣ ಹಕ್ಕು ಕಾಯ್ದೆಯಡಿ, ವಿದ್ಯಾರ್ಥಿಗಳನ್ನು 8ನೇ ತರಗತಿಯವರೆಗೆ ಅಡೆತಡೆಯಿಲ್ಲದೆ ತೇರ್ಗಡೆ ಮಾಡಲಾಗುತ್ತದೆ. ಶಿಕ್ಷಣ  ಹಕ್ಕು ಕಾಯ್ದೆಯ ಪ್ರಮುಖ ಅಂಶ ಇದಾಗಿದ್ದು, ಇದು 2010 ಏಪ್ರಿಲ್ 1ರಂದು ಜಾರಿಗೆ ಬಂತು.
20 ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ನಿರ್ಧಾರವನ್ನು ಜೂನ್ ನಲ್ಲಿ ಮುಂದೂಡಿದ್ದ ಕೇಂದ್ರ ಸಂಪುಟ ನಿನ್ನೆ ಅದಕ್ಕೆ ಕೂಡ ಒಪ್ಪಿಗೆ ನೀಡಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ 20 ವಿಶ್ವದರ್ಜೆ ಮಟ್ಟದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಯುಜಿಸಿ ಕಳೆದ ಫೆಬ್ರವರಿಯಲ್ಲಿ ಹೊಸ ನಿಯಮವನ್ನು ರಚಿಸಿತ್ತು. 20 ವಿಶ್ವವಿದ್ಯಾಲಯಗಳಲ್ಲಿ 10 ವಿಶ್ವವಿದ್ಯಾಲಯಗಳಿಗೆ ಈ ವರ್ಷದ ಬಜೆಟ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದ್ದು 10 ರಾಜ್ಯ ಸರ್ಕಾರಗಳ ನೆರವಿನಿಂದ ಸ್ಥಾಪನೆಯಾಗುವ ಶಿಕ್ಷಣ ಸಂಸ್ಥೆಗಳಿಗೆ ತಲಾ 500 ಕೋಟಿ ರೂಪಾಯಿಗಳವರೆಗೆ ಸಾರ್ವಜನಿಕ ನಿಧಿಯಡಿ ಹಣ ಪಡೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com