ಕಠ್ಮಂಡು: ಭೂತಾನ್ ನ ವಿದೇಶಾಂಗ ಸಚಿವ ದಾಮ್ ಶೋ ದೋರ್ ಜೀ ಅವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಡೋಕ್ಲಾಂ ಬಿಕ್ಕಟ್ಟು ಸೇರಿದಂತೆ ಹಲವು ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಠ್ಮಂಡುವಿನಲ್ಲಿ ನಡೆಯುತ್ತಿರುವ ಬಿಮ್ ಸ್ಟೆಕ್ ಶೃಂಗ ಸಭೆ ಹಿನ್ನೆಲೆ ಭೂತಾನ್ ವಿದೇಶಾಂಗ ಸಚಿವರು ಆಗಮಿಸಿದ್ದು ಈ ವೇಳೆ ಸುಷ್ಮಾ ಸ್ವರಾಜ್ ಅವರು ಹಲವು ಮಹತ್ವದ ವಿಷಯಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
ಬಿಮ್ ಸ್ಟೆಕ್ ಕೂಡದಲ್ಲಿ ಬಾಂಗ್ಲಾದೇಶ, ಭಾರತ, ಮ್ಯಾನ್ ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಲ ದೇಶಗಳಿವೆ.
ಭೂತಾನ್ ನ ವಿದೇಶಾಂಗ ಸಚಿವ ದಾಮ್ ಶೋ ದೋರ್ ಜೀ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೇಟಿಯಾಗಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಸಿಕ್ಕಿಂ ನಲ್ಲಿ ಚೀನಾದ ಪೀಪಲ್ಸ್ ಲಿಬರೆಶನ್ ಆರ್ಮಿ ರಸ್ತೆ ನಿರ್ಮಾಣ ಮಾಡುತ್ತಿರುವುದನ್ನು ಭಾರತೀಯ ಯೋಧರು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 16ರಿಂದ ಸಿಕ್ಕಿಂ ಸೆಕ್ಟರ್ ನ ಡೋಕ್ಲಾಂ ಬಳಿ ಉಭಯ ಸೇನೆಯ ಯೋಧರು ಮುಖಾಮುಖಿಯಾಗಿದ್ದು ಅಂದಿನಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.