ನವದೆಹಲಿ: ಎಸ್ ಪಿ ನೇತೃತ್ವದ ಅಖಿಲೇಶ್ ಯಾದವ್ ಸರ್ಕಾರದ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಸಮಾಜವಾದಿ ಪಕ್ಷದ ಸಚಿವರೊಬ್ಬರು ಸ್ಥಳೀಯ ಪತ್ರಕರ್ತರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ, ಆಡಳಿತಾರೂಢ ಸಮಾಜವಾದಿ ಪಕ್ಷ ಸಭ್ಯತೆ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸಚಿವ ರಾಧೆ ಶ್ಯಾಮ್ ಸಿಂಗ್ ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಸ್ಥಳೀಯ ಪತ್ರಕರ್ತ ಮನೋಜ್ ಗಿರಿ ಎಂಬುವರು ಆರೋಪಿಸಿದ್ದರು.
ಇದು ಚುನಾವಣಾ ಸಮಯವಾದ್ದರಿಂದ ನಿನ್ನನ್ನು ಜೀವಂತವಾಗಿ ಸುಡಲು ಆಗುತ್ತಿಲ್ಲ, ಎಲೆಕ್ಷನ್ ಮುಗಿದ ಮೇಲೆ ನಿನ್ನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಧಮ್ಕಿ ಹಾಕಿದ್ದಾರೆಂದು ಮನೋಜ್ ಗಿರಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಕರ್ತ ಮನೋಜ್ ಗಿರಿ ದೂರು ದಾಖಲಿಸಿದ್ದು ಮೊಬೈಲ್ ಆಡಿಯೋವನ್ನು ಪೊಲೀಸರಿಗೆ ನೀಡಿದ್ದಾರೆ, ಆದರೆ ಇದುವರೆಗೂ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ.
Advertisement