ಒಂದೇ ದಿನದಲ್ಲಿ ಹತ್ತು ಸಂಸ್ಥೆಗಳ ಸ್ಥಾಪನೆ; ಪಿತೂರಿ ನಡೆದಿರುವುದು ಸಾಬೀತು: ಸುಪ್ರೀಂ ಕೋರ್ಟ್

ಅನ್ಯಾಯವಾಗಿ ಗಳಿಸಿದ ಸಂಪತ್ತಿನಿಂದ ಕೇವಲ ಒಂದು ದಿನದಲ್ಲಿ 10 ಕಂಪೆನಿಗಳನ್ನು ಸ್ಥಾಪಿಸಲಾಗಿತ್ತು ಎಂದು...
ವಿ.ಕೆ.ಶಶಿಕಲಾ
ವಿ.ಕೆ.ಶಶಿಕಲಾ
ನವದೆಹಲಿ: ಅನ್ಯಾಯವಾಗಿ ಗಳಿಸಿದ ಸಂಪತ್ತಿನಿಂದ ಕೇವಲ ಒಂದು ದಿನದಲ್ಲಿ 10 ಕಂಪೆನಿಗಳನ್ನು ಸ್ಥಾಪಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್ ನಿನ್ನೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅಪರಾಧಿ ಎಂದು ತೀರ್ಪು ನೀಡುವಾಗ ಹೇಳಿದೆ. ಈ ವಿಷಯದಲ್ಲಿ ಮತ್ತಿಬ್ಬರಾದ ವಿ.ಎನ್.ಸುಧಾಕರನ್ ಮತ್ತು ಇಳವರಸಿ ಕೂಡ ಪಿತೂರಿ ನಡೆಸಿದ್ದಾರೆ ಎಂದು ನ್ಯಾಯಾಲಯ ಆರೋಪಿಸಿದೆ.
ನ್ಯಾಯಮೂರ್ತಿಗಳಾದ ಪಿ.ಸಿ.ಘೋಸೆ ಮತ್ತು ಅಮಿತಾವ ರಾಯ್ ಅವರನ್ನೊಳಗೊಂಡ ನ್ಯಾಯಪೀಠ, ತ್ವರಿತ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಈ ಕಂಪೆನಿಗಳು ನಮದು ಎಂಜಿಆರ್ ಮತ್ತು ಜಯಾ ಪಬ್ಲಿಕೇಶನ್ ನ ವಿಸ್ತರಣೆಯ ಕಂಪೆನಿಗಳಾಗಿವೆ. ಆ ಕಂಪೆನಿಗಳನ್ನು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಮತ್ತು ವಿ.ಕೆ.ಶಶಿಕಲಾ ಅವರ ಪರವಾಗಿ ಸ್ಥಾಪಸಲಾಗಿತ್ತು ಎಂದು ಹೇಳಿದೆ.
ತ್ವರಿತ ನ್ಯಾಯಾಲಯ ಈ ವಿಚಾರದಲ್ಲಿ ಸರಿಯಾದ ವಿಚಾರಣೆ ನಡೆಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆ ಸಮಯದಲ್ಲಿ 10 ಕಂಪೆನಿಗಳನ್ನು ಸ್ಥಾಪಿಸಲಾಗಿದ್ದು ವ್ಯಕ್ತಿಗಳ ನಡುವೆ ಪಿತೂರಿ ನಡೆದಿದೆ. 10 ಕಂಪೆನಿಗಳನ್ನು ಒಂದೇ ದಿನ ಸ್ಥಾಪಿಸಲಾಗಿದೆ. 34 ಸಂಸ್ಥೆಗಳನ್ನು ತೀರ್ಪು ನೀಡುವ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ ನ್ಯಾಯಾಲಯ ಅವುಗಳಲ್ಲಿ ಹೆಚ್ಚಿನ ಕಂಪೆನಿಗಳು 1991ರಿಂದ 1996ರ ಮಧ್ಯೆ ಸ್ಥಾಪನೆಗೊಂಡಿವೆ. ಈ ವರ್ಷಗಳಲ್ಲಿಯೇ ಅಪರಾಧಿಗಳು ಅಕ್ರಮ ಆಸ್ತಿ ಗಳಿಸಿದ್ದರು ಎನ್ನಲಾಗಿದೆ.
1994 ಜನವರಿ 25ರಂದು 6 ಕಂಪೆನಿಗಳು ಸ್ಥಾಪನೆಗೊಂಡರೆ 10 ಕಂಪೆನಿಗಳು 1995, ಫೆಬ್ರವರಿ 15ರಂದು ಸ್ಥಾಪನೆಗೊಂಡವು ಎಂದು ನಿನ್ನೆ ನೀಡಿದ ತೀರ್ಪಿನಲ್ಲಿ ಹೇಳಿದೆ.
ಅದಕ್ಕೆ ಹೊರತಾಗಿ ಶಶಿಕಲಾ ಮತ್ತು ಅವರ ಸಂಬಂಧಿಕರಾದ ವಿ.ಎನ್.ಸುಧಾಕರನ್ ಸ್ವತಂತ್ರ ಕಂಪೆನಿಗಳನ್ನು ಆರಂಭಿಸಿದ್ದರು. ಆಸ್ತಿ ಖರೀದಿ ಮಾತ್ರವಲ್ಲದೆ ಅನೇಕ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಹೆಚ್ಚಿನ ಘಟಕಗಳು ಮತ್ತು ಕಂಪೆನಿಗಳನ್ನು ಜಯಲಲಿತಾ ಅವರ ನಿವಾಸದಿಂದ ಕಾರ್ಯನಿರ್ವಹಿಸಲಾಗುತ್ತಿತ್ತು. ಈ ಬಗ್ಗೆ ಜಯಲಲಿತಾ ಅವರಿಗೆ ಗೊತ್ತಿಲ್ಲದೆ ಇದ್ದಿರಲಿಕ್ಕಿಲ್ಲ. ಅಥವಾ ಗೊತ್ತಿದ್ದರೂ ನಿರ್ಲಕ್ಷಿಸಿರಬಹುದು. ಕಂಪೆನಿಗಳ ವ್ಯವಹಾರ, ಚಟುವಟಿಕೆಗಳನ್ನು ಶಶಿಕಲಾ ಮತ್ತು ಆಕೆಯ ಸಂಬಂಧಿಕರು ನೋಡಿಕೊಳ್ಳುತ್ತಿದ್ದರು.
ಯಾವುದೇ ರಕ್ತ ಸಂಬಂಧವಿಲ್ಲದಿದ್ದರೂ ಅವರೆಲ್ಲರೂ ಜಯಲಲಿತಾ ನಿವಾಸದಲ್ಲಿಯೇ ಅವರೊಟ್ಟಿಗೆ ವಾಸವಾಗಿದ್ದರು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶಶಿಕಲಾ, ಸುಧಾಕರನ್ ಮತ್ತು ಇಳವರಸಿಯವರು ತಮಗೆ ವೈಯಕ್ತಿಕ ಆದಾಯ ಮೂಲವಿದೆ ಎಂದು ಹೇಳಿದರೂ ಕೂಡ, ವಾಸ್ತವವಾಗಿ ನೋಡಿದರೆ ಕಂಪೆನಿಗಳ ಸ್ಥಾಪನೆ ಮತ್ತು ಅಧಿಕ ಪ್ರಮಾಣದಲ್ಲಿ ಭೂಮಿ ಖರೀದಿ ಮಾಡಿದ್ದು ನೋಡಿದರೆ ಎಲ್ಲಾ ಅಪರಾಧಿಗಳು ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ ಇದ್ದು ಸಂಚು ರೂಪಿಸಿದ್ದಾರೆ ಎಂದು ಗೊತ್ತಾಗುತ್ತದೆ. ಸಾಮಾಜಿಕವಾಗಿ ಅವರು ಒಟ್ಟಿಗೆ ವಾಸಿಸುತ್ತಿರಲಿಲ್ಲ ಅಥವಾ ಮಾನವೀಯ ನೆಲೆಯಲ್ಲಿ ಅವರಿಗೆ ಉಚಿತ ವಸತಿ ನೀಡಿರುವುದು ಕೂಡ ಕಂಡುಬರುತ್ತಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.
ಜಯಲಲಿತಾ ಅವರ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಲು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಜಯಲಲಿತಾ ಅವರ ಪೊಯೆಸ್ ಗಾರ್ಡನ್ ನಿವಾಸದಲ್ಲಿ ವಾಸಿಸುತ್ತಿದ್ದರು ಎಂದು ವಾಸ್ತವ ಅಂಶಗಳು ಮತ್ತು ಸಂದರ್ಭಗಳು ತಿಳಿಸುತ್ತವೆ ಎಂದು ಸುಪ್ರೀಂ ಕೋರ್ಟ್ ನಿನ್ನೆ ನೀಡಿರುವ ತೀರ್ಪಿನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com