ಮುಂಬೈ: ಸದಾ ಮುಂಬೈಗೆ ವಲಸೆ ಬಂದಿರುವವರ ವಿರುದ್ಧ ಮಾತನಾಡುತ್ತಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್), ಅಚ್ಚರಿ ಎಂಬಂತೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 11 ಮಹಾರಾಷ್ಟ್ರರೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಂಎನ್ಎಸ್ ವಕ್ತಾರ ವಾಗೀಶ್ ಸಾರಸ್ವತ್ ಅವರು, ಚುನಾವಣೆಗೆ ಸ್ಪರ್ಧಿಸುತ್ತಿರುವ ಈ 11 ಅಭ್ಯರ್ಥಿಗಳು ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿವಿಧ ಘಟಕಗಳಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
'ಅವರು ಮೂಲತಃ ಮರಾಠಿ ಮಾತನಾಡುವ ವ್ಯಕ್ತಿಗಳಲ್ಲ ನಿಜ. ಆದರೆ ಹಲವು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ ಮತ್ತು ರಾಜ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರು ಸಹ ಮಹಾರಾಷ್ಟ್ರ ಹಾಗೂ ಮುಂಬೈ ಪ್ರಜೆಗಳೆಂದು ಪರಿಗಣಿಸಲಾಗಿದೆ' ಎಂದು ಸಾರಸ್ವತ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಪಕ್ಷ ವಲಸೆಗಾರರ ವಿರೋಧಿ ಅಲ್ಲ ಎಂಎನ್ಎಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಗುಜರಾತಿ, ಕ್ಯಾಥೋಲಿಕ್, ಮುಸ್ಲಿಮರು, ಉತ್ತರ ಭಾರತೀಯರು ಹಾಗೂ ದಕ್ಷಿಣ ಭಾರತೀಯರು ಸೇರಿದಂತೆ 11 ಮಹಾರಾಷ್ಟ್ರರೇತರ ಅಭ್ಯರ್ಥಿಗಳನ್ನು ಎಂಎನ್ಎಸ್ ಕಣಕ್ಕಿಳಿಸಿದೆ.