ಮುಂಬೈ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ. ಝಾಕಿರ್ ನಾಯ್ಕ್ ಗೆ ಸೋಮವಾರ ಜಾರಿ ನಿರ್ದೇಶನಾಲಯ(ಇಡಿ) ನೋಟಿಸ್ ಜಾರಿ ಮಾಡಿದೆ.
ವಿದೇಶದಿಂದ ಇಂಟರ್ ನೆಟ್ ಮೂಲಕ ವಿಡಿಯೋ ವಿಚಾರಣೆಗೆ ಅವಕಾಶ ನೀಡಬೇಕು ಎಂಬ ಝಾಕಿರ್ ನಾಯಕ್ ಮನವಿಯನ್ನು ತಿರಸ್ಕರಿಸಿರುವ ಜಾರಿ ನಿರ್ದೇಶನಾಲಯ, ಖುದ್ದು ವಿಚಾರಣೆಗೆ ಹಾಜರಾಗುವಂತೆ ಇಂದು ನಾಲ್ಕನೆ ಹಾಗೂ ಕೊನೆ ಬಾರಿ ಸಮನ್ಸ್ ಜಾರಿ ಮಾಡಿದೆ.
ಇದು ಕೊನೆ ನೋಟಿಸ್ ಎಂದು ಎಚ್ಚರಿಸಿರುವ ಜಾರಿ ನಿರ್ದೇಶನಾಲಯ, ಈ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ಝಾಕಿರ್ ನಾಯಕ್ ವಿರುದ್ಧ ಬಂಧನ ವಾರಂಟ್ ಜಾರಿ ಮಾಡುವಂತೆ ಕೋರ್ಟ್ ಮೊರೆ ಹೋಗುವ ಸೂಚನೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಡಿಯೋ ಲಿಂಗ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇಲ್ಲ. ಅಲ್ಲದೆ ಝಾಕಿರ್ ನಾಯಕ್ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ಅವರು ಸ್ವತಃ ವಿಚಾರಣೆಗೆ ಒಳಗಾಗಬೇಕು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕೋಮುವಾದ ಮತ್ತು ಭಯೋತ್ಪಾದನೆ ಪ್ರಚೋದಕ ಭಾಷಣಗಳನ್ನು ಪ್ರಸ್ತುತ ಪಡಿಸಿರುವ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ ಈಗಾಗಲೇ ಜಾಕಿರ್ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿದೇಶದಲ್ಲಿರುವ ಜಾಕಿರ್ ನಾಯಕ್ ನನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ.
ನಾಯಕ್ ಒಡೆತನದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್ಎಫ್) ಸಂಸ್ಥೆಯನ್ನು ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ.