ಕರೆಸಿ ಅವಮಾನ ಮಾಡಿದರು: ಹರ್ಯಾಣದಲ್ಲಿ ಎನ್ಆರ್ ಐ ಗಳ ಅಸಮಾಧಾನ

ಹರ್ಯಾಣ ಸರ್ಕಾರ ಆಯೋಜಿಸಿದ್ದ ಪ್ರವಾಸಿ ಹರ್ಯಾಣ ದಿವಸ್ ಕಾರ್ಯಕ್ರಮದಲ್ಲಿ ಕೆಲವು ಅನಿವಾಸಿ ಭಾರತೀಯರಿಗೆ ಕಹಿ ಅನುಭವಗಳಾದ ಬಗ್ಗೆ ವರದಿಯಾಗಿದೆ.
ಪ್ರವಾಸಿ ಭಾರತೀಯ ದಿವಸ್
ಪ್ರವಾಸಿ ಭಾರತೀಯ ದಿವಸ್
ಗುರ್ಗಾಂವ್: ಹರ್ಯಾಣ ಸರ್ಕಾರ ಆಯೋಜಿಸಿದ್ದ ಪ್ರವಾಸಿ ಹರ್ಯಾಣ ದಿವಸ್ ಕಾರ್ಯಕ್ರಮದಲ್ಲಿ ಕೆಲವು ಅನಿವಾಸಿ ಭಾರತೀಯರಿಗೆ ಕಹಿ ಅನುಭವಗಳಾದ ಬಗ್ಗೆ ವರದಿಯಾಗಿದೆ. ಆಯೋಜಕರು ಕಲ್ಪಿಸಿದ್ದ ವ್ಯವಸ್ಥೆ ಕಳಪೆಯಾಗಿತ್ತು. ನಮ್ಮನ್ನು ಕರೆಸಿ ಅವಮಾನ ಮಾಡಲಾಗಿದೆ ಎಂದು ಕೆಲವು ಅನಿವಾಸಿ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   
ಹರ್ಯಾಣ ಸರ್ಕಾರ ಹಾಗೂ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಪ್ರವಾಸಿ ಹರ್ಯಾಣ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಯೋಜಕರ ಪ್ರಕಾರ 33 ವಿವಿಧ ದೇಶಗಳಿಂದ 400 ಎನ್ ಆರ್ ಐ ಗಳು ಭಾಗವಹಿಸಿದ್ದರು. ಈ ಪೈಕಿ ಹಲವರಿಗೆ ಆಹಾರ, ಕೊಠಡಿ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಎನ್ ಆರ್ ಐ ಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಹರ್ಯಾಣ ಸರ್ಕಾರ ನಮ್ಮನ್ನು ಕರೆಸಿ ಅವಮಾನ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ಅನಿವಾಸಿ ಭಾರತೀಯರಾದ ನರೇಂದ್ರ ಜೋಷಿ ಹಾಗೂ ಜಸ್ವೀರ್ ಸೈನಿ ಹರ್ಯಾಣ ಸರ್ಕಾರದ ವ್ಯವಸ್ಥೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಡಿ.6-1೦ ವರೆಗೆ ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆಯೇ ಹರ್ಯಾಣ ಕೃಷಿ ಸಚಿವರೊಂದಿಗೆ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದೆವು. ಪ್ರವಾಸಿ ಭಾರತೀಯ ದಿವಸ್ ಗೆ ನಮ್ಮನ್ನು ಆಹ್ವಾನಿಸಿದ್ದ ಕೃಷಿ ಸಚಿವರು, ದೆಹಲಿಯ ಹರ್ಯಾಣ ಭವನದಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ನಾವು ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕಾಗಿ ದೆಹಲಿಗೆ ಬಂದಿಳಿದಾಗ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ. ಕೊಠಡಿಗಳನ್ನು ಕಾಯ್ದಿರಿಸಲಾಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ 216 ನೇ ನಂಬರ್ ಕೊಠಡಿಯನ್ನು ನೀಡಿ, ಮತ್ತೊಂದು ಕೊಠಡಿಯನ್ನು ಪಂಜಾಬ್ ಭವನದಲ್ಲಿ ನೀಡಲಾಗುವುದು ಎಂದರು. ಆದರೆ 216 ನೇ ನಂ ಕೊಠಡಿಯಲ್ಲಿ ಬೇರೆ ಯಾರೋ ಇದ್ದರು, ನಂತರ ಬೆಳಿಗ್ಗೆ  ಉಳಿದ ಎನ್ ಆರ್ ಐ ಗಳು ತಂಗಲು ಸೂಚಿಸಲಾಗಿದ್ದ ಗುರ್ಗಾಂವ್ ನ ವಿವಾಂತಾ ಬೈ ತಾಜ್ ಹೊಟೇಲ್ ಗೆ ಹೋದೆವು ಆದರೆ ಅಲ್ಲಿ ಬೆಳಿಗ್ಗೆ 11 ಗಂಟೆಗೂ ಮುನ್ನ ಚೆಕ್ ಇನ್ ಮಾಡುವಂತಿಲ್ಲ ಎಂದು ಹೇಳಿದರು ಎಂದು ಅನಿವಾಸಿ ಭಾರತೀಯರು ಹೇಳಿದ್ದಾರೆ. 
ಸುಮಾರು 25 ಎನ್ ಆರ್ ಐ ಗಳಿಗೆ ಇದೇ ರೀತಿಯ ಅನುಭವಗಳಾಗಿದ್ದು, ಆಹಾರ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿಯನ್ನೂ ಅನಿವಾಸಿ ಭಾರತೀಯರು ಎದುರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಅವ್ಯವಸ್ಥೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಇಂತಹ ಘಟನೆ ನಡೆಯಬಾರದಿತ್ತು, ಎನ್ಆರ್ ಐಗಳಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com