ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ನಡೆಸಿದ್ದು, ಚುನಾವಣಾ ಪ್ರಚಾರ ತಂಡವನ್ನು ಪ್ರಕಟಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಸೇರಿದಂತೆ 17 ಸಚಿವರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅವರನ್ನು ಪ್ರಚಾರ ತಂಡದಿಂದ ಕೈಬಿಡಲಾಗಿದೆ.
ಫೆ.11 ರಿಂದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪರಿಣಾಮಕಾರಿ ಪ್ರಚಾರಕ್ಕೆ ಬಿಜೆಪಿ ತಯಾರಿ ನಡೆಸಿದೆ. ಎಲ್ ಕೆ ಅಡ್ವಾಣಿ, ಉತ್ತರ ಪ್ರದೇಶದ ಸಂಸದರೇ ಆದ ಮುರಳಿ ಮನೋಹರ್ ಜೋಷಿ ಅವರೊಂದಿಗೆ ಸುಲ್ತಾನ್ ಪುರ ಸಂಸದ ವರುಣ್ ಗಾಂಧಿ ಅವರನ್ನೂ ಪ್ರಚಾರ ತಂಡದಿಂದ ಕೈ ಬಿಟ್ಟಿರುವುದು ಕುತೂಹಲ ಮೂಡಿಸಿದೆ. ಇನ್ನು ವಿವಾದಾತ್ಮಕ ಹೇಳಿಕೆ ನೀಡುವ ಸಂಸದ ಸಾಕ್ಷಿ ಮಹಾರಾಜ್ ಅವರನ್ನೂ ಪ್ರಚಾರ ತಂಡದಿಂದ ಕೈಬಿಡುವ ಮೂಲಕ ಬಿಜೆಪಿ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.
ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತದ ಮಾದರಿ, ಉದ್ಯೋಗ ಸೃಷ್ಟಿ, ಅಭಿವೃದ್ಧಿಯ ವಿಷಯಗಳನ್ನು ಪ್ರಧಾನ ಅಂಶವನ್ನಾಗಿರಿಸಿಕೊಂಡು ಉತ್ತರ ಪ್ರದೇಶದ ಚುನಾವಣೆಯನ್ನು ಎದುರಿಸಲು ಬಿಜೆಪಿ ನಿರ್ಧರಿಸಿದ್ದು ಒಟ್ಟು 12 ರ್ಯಾಲಿಗಳನ್ನು ನಡೆಸಲಿದೆ.