ಮುಂಬಯಿ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ತಮ್ಮ ಬೆಂಬಲಿಗರಿಂದಲೇ ಪತನವಾದಂತೆ ನರೇಂದ್ರ ಮೋದಿ ಕೂಡ ತಮ್ಮ ಭಕ್ತ (ಬೆಂಬಲಿಗ)ರಿಂದಲೇ ಪತನವಾಗಲಿದ್ದಾರೆ ಎಂದು ಶಿವಸೇನೆ ಹೇಳಿದೆ.
ಮುಂಬೈ ಮಹಾನಗರ ಪಾಲಿಕೆ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಶಿವಸೇನೆ ಈ ರೀತಿ ಪ್ರತಿಕ್ರಿಯಿಸಿದೆ.
ಮಹಾರಾಷ್ಟ್ರದ ಹಣಕಾಸು ಸಚಿವ ಸುಧೀರ್ ಮುಂಗ್ಟಿವಾರ್ ಜಿಎಸ್ಟಿಯ ಮೊದಲ ಭಾಗವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಪೊರೇಟರ್ಗಳು ಮೋದಿ ಪರ ಘೋಷಣೆ ಕೂಗಿದ್ದರು. ಇವತ್ತು ಅನಗತ್ಯವಾಗಿ ಮೋದಿ ಪರ ಘೋಷಣೆ ಕೂಗುತ್ತಿರುವವರು ಮೋದಿಯವರ ವ್ಯಕ್ತಿತ್ವಕ್ಕೆ ಚ್ಯುತಿಯನ್ನುಂಟು ಮಾಡುತ್ತಿದ್ದಾರೆ.
ಅದೊಂದು ಕಾಲವಿತ್ತು ಇಂದಿರಾ ಗಾಂಧಿ ಪರವೂ ಅವರ ಬೆಂಬಲಿಗರು ಇದೇ ರೀತಿಯ ಘೋಷಣೆ ಕೂಗುತ್ತಿದ್ದರು. ಆಕೆಯ ಬೆಂಬಲಿಗರು ಇಂದಿರಾ ಎಂದರೆ ಇಂಡಿಯಾ ಎಂದು ಕೂಗಿ ದೇಶವನ್ನು ಅವಮಾನಿಸಿದ್ದರು. ಆ ರೀತಿಯ ಬೆಂಬಲವೇ ಆಕೆಯನ್ನು ಸೋಲುವಂತೆ ಮಾಡಿತು.
ಇಂದಿರಾ ಗಾಂಧಿ ಅವರು 1971ರಲ್ಲಿ ಪಾಕಿಸ್ತಾನದ ವಿರುದ್ದ ಯುದ್ಧವನ್ನು ಮಾತ್ರ ಗೆದ್ದಿರಲಿಲ್ಲ ಅವರು ಪಾಕಿಸ್ತಾನವೇ ಮಂಡಿಯೂರುವಂತೆ ಮಾಡಿದರು. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾವು ಹೇಳುವುದಿಷ್ಟೇ,ಇಂದಿರಾ ಗಾಂಧಿ ಬಗ್ಗೆ ಅವರ ಬೆಂಬಲಿಗರಿಗಿದ್ದ ಅತಿಯಾದ ಭಕ್ತಿಯೇ ಇಂದಿರಾ ಸೋಲಿಗೆ ಕಾರಣವಾಯಿತು.
ಮೋದಿಯ ವಿರುದ್ಧ ಜಗತ್ತೇ ತಿರುಗಿ ನಿಂತಿದ್ದಾಗ, ಶಿವಸೇನೆ ಅವರ ಜತೆಗೆ ನಿಂತಿತ್ತು. ಈಗ ಮೋದಿ ಪರ ಘೋಷಣೆ ಕೂಗುವವರೆಲ್ಲಾ ಭಯದಿಂದ ಮೌನವಾಗಿದ್ದರು. ನಮ್ಮ ಸ್ನೇಹಿತರು (ಬಿಜೆಪಿ), ತಮ್ಮ ಭಕ್ತರ ಬಗ್ಗೆ ಎಚ್ಚರದಿಂದಿರಬೇಕು ಎಂದು ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದಿದೆ.