ನವದೆಹಲಿ:ಬಂಡಾಯ ಪೀಡಿತ ರಾಜ್ಯವಾದ ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರಿಂದ ನಡೆದಿದ ಎನ್ನಲಾದ ನಕಲಿ ಎನ್ ಕೌಂಟರ್ ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ನ್ಯಾಯಾಧೀಶರಾದ ಎಂ.ಬಿ.ಲೋಕೂರ್ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಸಿಬಿಐ ನಿರ್ದೇಶಕರಿಗೆ ಆದೇಶ ನೀಡಿ, ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಅಧಿಕಾರಿಗಳ ತಂಡವೊಂದನ್ನು ರಚಿಸುವಂತೆ ಸೂಚಿಸಿದೆ.
ಮಣಿಪುರದಲ್ಲಿ 2000ದಿಂದ 2012ರವರೆಗೆ ಭದ್ರತಾ ಪಡೆಗಳು ಮತ್ತು ಪೊಲೀಸರಿಂದ 1,528 ಮಂದಿ ಕೈದಿಗಳ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿ ಪರಿಹಾರ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಂತಹ ಬಂಡುಕೋರ ಪೀಡಿತ ರಾಜ್ಯಗಳಲ್ಲಿ ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳನ್ನು ನಡೆಸಿದ ಬಗ್ಗೆ ಎಫ್ಐಆರ್ ಗಳಿಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕಳೆದ ಏಪ್ರಿಲ್ 20ರಂದು ಭಾರತೀಯ ಸೇನೆ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.
ಪ್ರತಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಸೇನೆಯ ಮೇಲೆ ಸಂಶಯ ಪಡಲು ಸಾಧ್ಯವಿಲ್ಲ. ಪ್ರತಿ ನ್ಯಾಯಾಂಗ ತನಿಖೆ ಸೇನೆಯ ವಿರುದ್ಧವಾಗಿರಲು ಸಾಧ್ಯವಿಲ್ಲ. ಮಣಿಪುರದಲ್ಲಿ ಹೆಚ್ಚುವರಿ ನ್ಯಾಯಾಂಗ ಕೊಲೆ ಪ್ರಕರಣಗಳು ಹತ್ಯಾಕಾಂಡದ ಪ್ರಕರಣಗಳಲ್ಲ. ಬದಲಾಗಿ ಮಿಲಿಟರಿ ಕಾರ್ಯಾಚರಣೆಗಳು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಹೇಳಿದೆ.
ಸೇನಾಪಡೆಗಳ ನಕಲಿ ಎನ್ ಕೌಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಮಣಿಪುರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದೆ.