ಮುಂಬಯಿ: ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಮುಸ್ಲಿಂ ಸಮುದಾಯದ ವಿವಾದಾತ್ಮಕ ವಿಚ್ಛೇದನ ಪದ್ಧತಿ ತ್ರಿವಳಿ ತಲಾಖ್ ಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಕಾರಣ ಎಂದು ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಇಂದ್ರೇಶ್ ಕುಮಾರ್, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ, ಮುಂತಾದ ಕೆಟ್ಟ ಪದ್ಧತಿಗಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ ಎಂದು ಆರೋಪಿಸಿದ್ದಾರೆ.
ಪ್ರೀತಿ ಪವಿತ್ರವಾದದ್ದು, ಆದರೆ ಇದನ್ನು ಪಾಶ್ಚಿಮಾತ್ಯ ಸಂಸ್ಕೃತಿ ಅಭಿರುಚಿಯನ್ನಾಗಿ ಬದಲಾಯಿಸಿದೆ, ಕೆಲವೊಮ್ಮೆ ಪ್ರೀತಿಯನ್ನು ವ್ಯವಹಾರವನ್ನಾಗಿಸಲಾಗುತ್ತದೆ. ಅತ್ಯಾಚಾರ, ವಿಚ್ಚೇದನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣ.
ಇಂದಿನ ದಿನಗಳಲ್ಲಿ ವ್ಯಾಲೆಂಟೈನ್ಸ್ ಡೇ ಯಂದು ಜನ ಮುಕ್ತವಾಗಿ ತಮ್ಮ ಪ್ರೇಮ ನಿವೇದಿಸಿಕೊಳ್ಳುತ್ತಾರೆ, ಇದು ತ್ರಿವಳಿ ತಲಾಖ್ ಹೆಚ್ಚಾಗಲು ಮತ್ತೊಂದು ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.