ನವದೆಹಲಿ: ಜುಲೈ 1ರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಹೊಸ ಪ್ಯಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಶನಿವಾರ ಸ್ಪಷ್ಟಪಡಿಸಿದೆ
ಐಟಿ ರಿಟರ್ನ್ಸ್ ಸಲ್ಲಿಸಲು ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಮಾರನೇ ದಿನವೇ ಸಿಬಿಡಿಟಿ ಜು.1ರಿಂದ ಐಟಿ ರಿಟರ್ನ್ಸ್ ಸಲ್ಲಿಸಲು ಹಾಗೂ ಹೊಸ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದಾಗಿ ಇಂದು ಸಿಬಿಡಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾನೂನು ಸಚಿವಾಲಯ, ವಿತ್ತ ಸಚಿವಾಲಯ ಹಾಗೂ ಸಿಬಿಡಿಟಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣ ಅಧ್ಯಯನ ಮಾಡಿದ ಬಳಿಕ ಈ ಸೂಚನೆ ಹೊರಡಿಸಲಾಗಿದ್ದು, ಸುಪ್ರೀಂ ಕೋರ್ಟ್ ಪ್ರಸ್ತೂತ ಆಧಾರ್ ಕಾರ್ಡ್ ಹೊಂದಿರದವರಿಗೆ ತಾತ್ಕಾಲಿಕ ವಿನಾಯಿತಿ ಮಾತ್ರ ನೀಡಿದೆ ಎಂದು ಹೇಳಿದೆ.
ಆಧಾರ್ ಸಂಖ್ಯೆ ಜೊತೆಗೆ ತಳಕುಹಾಕಿಕೊಂಡಿರುವ ಖಾಸಗಿತನ ಹಕ್ಕುಗಳಿಗೆ ಸಂಬಂಧಿಸಿದ ವಿಚಾರವನ್ನು ಸಂವಿಧಾನ ಪೀಠ ಇತ್ಯರ್ಥ ಪಡಿಸುವವರೆಗೆ ಸುಪ್ರೀಂ ಕೋರ್ಟ್ ನಿನ್ನೆ ಆಧಾರ್ ಕಡ್ಡಾಯಗೊಳಿಸದಂತೆ ಭಾಗಶಃ ತಡೆಯಾಜ್ಞೆ ನೀಡಿತ್ತು.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ‘139ಎಎ’ಯು, ಪ್ಯಾನ್ ಕಾರ್ಡ್ ಪಡೆಯಲು ಮತ್ತು ಆದಾಯ ಲೆಕ್ಕಪತ್ರ ಸಲ್ಲಿಕೆಗೆ ಜುಲೈ 1ರಿಂದ ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುತ್ತದೆ.