ಎಲ್ಲ 'ಸೂಪರ್ ೩೦' ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸಡ್ ನಲ್ಲಿ ತೇರ್ಗಡೆ: ಸಂಸ್ಥಾಪಕ
ಸವಲತ್ತು ವಂಚಿತ ವಿದ್ಯಾರ್ಥಿಗಳಿಗಾಗಿಯೇ ಉಚಿತವಾಗಿ ನಡೆಸುವ ತರಬೇತಿ ಕೇಂದ್ರ ಬಿಹಾರದ 'ಸೂಪರ್ ೩೦'ಯ ಎಲ್ಲ ೩೦ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸಡ್ ನಲ್ಲಿ ತೇರ್ಗಡೆಯಾಗಿರುವುದಾಗಿ ಅದರ ಸಂಸ್ಥಾಪಕ,
ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವ ಸೂಪರ್ ೩೦ ಸಂಸ್ಥಾಪಕ ಆನಂದ್ ಕುಮಾರ್
ಪಾಟ್ನಾ: ಸವಲತ್ತು ವಂಚಿತ ವಿದ್ಯಾರ್ಥಿಗಳಿಗಾಗಿಯೇ ಉಚಿತವಾಗಿ ನಡೆಸುವ ತರಬೇತಿ ಕೇಂದ್ರ ಬಿಹಾರದ 'ಸೂಪರ್ ೩೦'ಯ ಎಲ್ಲ ೩೦ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸಡ್ ನಲ್ಲಿ ತೇರ್ಗಡೆಯಾಗಿರುವುದಾಗಿ ಅದರ ಸಂಸ್ಥಾಪಕ, ಗಣಿತಜ್ಞ ಆನಂದ್ ಕುಮಾರ್ ಭಾನುವಾರ ಹೇಳಿದ್ದಾರೆ. ಐಐಟಿ ಪ್ರವೇಶ ಪಡೆಯಲು ಜೆಇಇ-ಅಡ್ವಾನ್ಸಡ್ ನಲ್ಲಿ ತೇರ್ಗಡೆಯಾಗಬೇಕಿದೆ.
ಟ್ಯಾಕ್ಸಿ ಚಾಲಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ರೈತರು, ದಿನಗೂಲಿ ಕಾರ್ಮಿಕರು ಹೀಗೆ ಸವಲತ್ತು ವಂಚಿತ ಮಕ್ಕಳು ಈ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ಪಾಠ ಕಲಿಯುತ್ತಾರೆ. ಈ ಎಲ್ಲ ಮಕ್ಕಳು ಸಾಮಾನ್ಯವಾಗಿ ಬಿಹಾರ ಶಾಲಾ ಪರೀಕ್ಷಾ ಸಮಿತಿಯ ಶಾಲೆಗಳಿಂದ ಬಂದವರೇ!
"ಈ ವರ್ಷ ನಮ್ಮ ಎಲ್ಲ ೩೦ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸಡ್ ನಲ್ಲಿ ತೇರ್ಗಡೆ ಹೊಂದಿದ್ದಾರೆ ಈ ಮೂಲಕ ಇಲ್ಲಿಯವರೆಗೂ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರ ಸಂಖ್ಯೆ ೪೦೦ರ ಆಸುಪಾಸಿಗೆ ಬಂದಿದೆ" ಎಂದು ಆನಂದ್ ಕುಮಾರ್ ಹೇಳಿದ್ದಾರೆ.
ಈ ಯಶಸ್ಸಿಗೆ ಕಷ್ಟ ಪಟ್ಟು ಕೆಲಸ ಮಾಡಿರುವುದು ಮತ್ತು ದಿಟ್ಟ ಗುರಿ ಕಾರಣ ಎಂದಿರುವ ಅವರು "ಈ ತರಬೇತಿಗೆ ನಾವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷೆ ನಡೆಸುತ್ತೇವೆ. ಇದರ ಸಂಪೂರ್ಣ ವಿವರಗಳನ್ನು ನಮ್ಮ ಅಂತರ್ಜಾಲ ತಾಣದಲ್ಲಿ ಪ್ರಕಟಿಸುತ್ತೇವೆ" ಎಂದು ತಿಳಿಸಿದ್ದಾರೆ.
'ಸೂಪರ್ ೩೦'ಗೆ ಆಯ್ಕೆಯಾಗುವ ಬಡ ಕುಟುಂಬಗಳ ವಿದ್ಯಾರ್ಥಿಗಳು ದಿನಕ್ಕೆ ೧೬ ಘಂಟೆಗಳ ಶಿಕ್ಷಣ ಮಾರ್ಗದರ್ಶಿಯನ್ನು ಪಾಲಿಸಬೇಕಾಗುತ್ತದೆ. ತರಬೇತಿ, ಊಟ ಮತ್ತು ವಸತಿ ಈ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ.
'ಸೂಪರ್ ೩೦'ಯಲ್ಲಿ ಅಧ್ಯಯನ ಮಾಡಿದ ಸುಮಾರು ೩೯೬ ವಿದ್ಯಾರ್ಥಿಗಳು ಇಲ್ಲಿಯವರೆಗೂ ಐಐಟಿ ಪ್ರವೇಶ ಪಡೆದಿದ್ದಾರೆ.