ದೇಶ
ಕರ್ನಾಟಕದ ಬಹುತೇಕ ಮಂದಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ: ಶಿವಸೇನೆ
ಕರ್ನಾಟಕದ ಬಹುತೇಕ ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಗೋವಾ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಜೋಶಿ ಉದ್ಧಟತನದ ಹೇಳಿಕೆ ...
ಪಣಜಿ: ಕರ್ನಾಟಕದ ಬಹುತೇಕ ಜನರಿಗೆ ರಾಷ್ಟ್ರಗೀತೆ ಹಾಡಲು ಬರುವುದಿಲ್ಲ ಎಂದು ಶಿವಸೇನೆಯ ಗೋವಾ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಜೋಶಿ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಗೋವಾದ ಜನ ದೇಶಭಕ್ತರು. ಇಲ್ಲಿ ಕರ್ನಾಟಕದಂತೆ ಅಲ್ಲ, ಬಹುತೇಕ ವಿದ್ಯಾರ್ಥಿಗಳು ವಂದೇ ಮಾತರಂ ಹಾಡನ್ನು ಸಂಪೂರ್ಣವಾಗಿ ಹಾಡಬಲ್ಲರು. ಆದರೆ ಕರ್ನಾಟಕದಲ್ಲಿ ಅನೇಕರಿಗೆ ರಾಷ್ಟ್ರಗೀತೆಯನ್ನು ಹೇಗೆ ಹಾಡಬೇಕೆಂಬುದೇ ತಿಳಿದಿಲ್ಲ. ಅಲ್ಲದೇ ಅವರಿಗೆ ನಮ್ಮ ರಾಷ್ಟ್ರಪಿತ ಯಾರೂ ಎಂಬುದೂ ಗೊತ್ತಿಲ್ಲ ಎಂದಿದ್ದಾರೆ.
2009ರಲ್ಲಿ ನಡೆದ ಮಂಗಳೂರು ಪಬ್ ದಾಳಿ ಬಗ್ಗೆ ಮಾತನಾಡಿದ ಜೋಷಿ, ದಾಳಿ ವೇಳೆ ಶ್ರೀರಾಮಸೇನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದರು ಎನ್ನಲಾದ ಯುವತಿಯ ಪೋಷಕರು, ಶ್ರೀರಾಮಸೇನೆಯ ಕಾರ್ಯವನ್ನು ಶ್ಲಾಘಿಸಿದ್ದರು. ಅಲ್ಲದೇ ಮುತಾಲಿಕ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಜೋಶಿ ಹೇಳಿದ್ದಾರೆ.
ಟೂರಿಸ್ಟ್ಗಳು 12 ಗಂಟೆಗೆ ಪಬ್ಗೆ ತೆರಳಿ ಕುಣಿದು ಕುಪ್ಪಳಿಸಿದರೆ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ಥಳೀಯ ಯುವಕ, ಯುವತಿಯರು ಈ ರೀತಿಯಾದರೆ ನಾವು ಅವರಿಗೆ ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯ ಎಂದು ಜೋಶಿ ಹೇಳಿದರು.
ಗೋವಾ ಪ್ರವೇಶಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ಗೆ ನಿಷೇಧ ಹೇರಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಶ್ರೀರಾಮಸೇನೆಯವರು ಗೋವಾದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಯಸಿದರೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.