ನಾನು ರೈಲ್ವೆ ಸಚಿವರ ಭೇಟಿ ಮಾಡಬೇಕು: ರೈಲಿನ ನೆಲದ ಮೇಲೆ ಮಲಗಿ ಪ್ರಯಾಣಿಸಿದ ಪ್ಯಾರಾ ಅಥ್ಲೀಟ್

ವಿಕಲಚೇತನರ ಕೋಟಾದಡಿ ಲೋವರ್ ಬರ್ತ್ ನೀಡದ ಹಿನ್ನೆಲೆಯಲ್ಲಿ ರೈಲಿನ ನೆಲದ ಮೇಲೆಯೇ ಮಲಗಿ ಪ್ರಯಾಣಿಸಿದ ಅಂತಾರಾಷ್ಟ್ರೀಯ....
ಸುವರ್ಣ ರಾಜ್
ಸುವರ್ಣ ರಾಜ್
ನವದೆಹಲಿ: ವಿಕಲಚೇತನರ ಕೋಟಾದಡಿ ಲೋವರ್ ಬರ್ತ್ ನೀಡದ ಹಿನ್ನೆಲೆಯಲ್ಲಿ ರೈಲಿನ ನೆಲದ ಮೇಲೆಯೇ ಮಲಗಿ ಪ್ರಯಾಣಿಸಿದ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಟೂರ್ನಮೆಂಟ್ ಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ಪ್ಯಾರಾ ಅಥ್ಲೀಟ್ ಸುವರ್ಣ ರಾಜ್ ಅವರು, ಈ ಸಂಬಂಧ ತಾವು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಬೇಕು ಎಂದು ಸೋಮವಾರ ಹೇಳಿದ್ದಾರೆ.
ಸುವರ್ಣ ಅವರು ನಾಗ್ಪುರ- ನಿಜಾಮುದ್ದೀನ್ ಗರಿಬ್ ರಥ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಅವರಿಗೆ ಲೋವರ್ ಬರ್ತ್ ನೀಡುವ ಬದಲು ಮೇಲಿನ ಸೀಟ್ ನೀಡಿದ್ದರು. ರೈಲಿನಲ್ಲಿ ಸೀಟ್ ಬದಲಿಸಲು ಸಹ ಪ್ರಯಾಣಿಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ಯಾರಾ ಅಥ್ಲೀಟ್ ರೈಲಿನ ನೆಲದ ಮೇಲೆಯೇ ಮಲಗಿ ಪ್ರಯಾಣಿಸಿದ್ದರು.
ಈ ಕುರಿತು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ತನಿಖೆಗೆ ಆದೇಶಿಸಿದ್ದಾರೆ. ಆದರೆ ಈ ಕುರಿತು ಎಎನ್ಐಗೆ ಪ್ರತಿಕ್ರಿಯಿಸಿರುವ ಸುವರ್ಣ ರಾಜ್ ಅವರು, ನನಗೆ ಯಾವುದೇ ತನಿಖೆ ಬೇಕಾಗಿಲ್ಲ ಮತ್ತು ಇದು ಸಮಸ್ಯೆಗೆ ಪರಿಹಾರವೂ ಅಲ್ಲ. ನಾನು ಸಚಿವರನ್ನು ಭೇಟಿ ಮಾಡಬೇಕು ಮತ್ತು ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತರಬೇಕು ಎಂದಿದ್ದಾರೆ. ಅಲ್ಲದೆ ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು ಎಂದು ಒತ್ತಾಯಿಸಿದ್ದಾರೆ.
ಸೀಟ್ ಬದಲಾಯಿಸಿಕೊಡಿ ಎಂದು ನಾನು ಟಿಕೆಟ್ ಪರೀಕ್ಷಕರ ಬಳಿ ಕೇಳಿಕೊಂಡೆ. ಆದರೆ ಅವರು ಬೋಗಿಯಲ್ಲಿದ್ದ ಪ್ರಯಾಣಿಕರೊಂದಿಗೆ ಬದಲಾಯಿಸುವಂತೆ ಹೇಳಿದರು. ಆದರೆ ಯಾರೂ ನನಗೆ ಸೀಟ್ ಬಿಟ್ಟು ಕೊಡಲಿಲ್ಲ. ಹೀಗಾಗಿ ನಾನು ಮತ್ತು ನನ್ನ ಆರು ವರ್ಷದ ಮಗ ನೆಲದಲ್ಲೇ ಮಲಗಬೇಕಾಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com