ಸುಮಾರು 260 ಎಕರೆ ವಿಸ್ತೀರ್ಣದಲ್ಲಿ ಜವಾಹರ್ ಬಾಘ್ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಅನಧಿಕೃತವಾಗಿ ಠಿಕಾಣಿ ಹೂಡಿರುವ 3000 ನಿವಾಸಿಗಳನ್ನು ತೆರವುಗೊಳಿಸುವಂತೆ ಅಲಹಬಾದ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ತೆರವು ಕಾರ್ಯಾಚರಣೆಗೆ ಮುಂದಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನಿವಾಸಿಗಳು ಪೊಲೀಸರ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.