ಹೈದರಾಬಾದ್: ಅಮೆರಿಕಾದಲ್ಲಿ ನಡೆಯುತ್ತಿರುವ ಜನಾಂಗೀಯ ದ್ವೇಷದ ವಿರುದ್ಧ ಹೋರಾಡಲು ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್ ಮತ್ತು ಶಾರೂಖ್ ಖಾನ್ ಬೆಂಬಲ ನೀಡಬೇಕು ಎಂದು ಕಾನ್ಸಾಸ್ ನಲ್ಲಿ ಹತ್ಯೆಗೀಡಾದ ಆಂಧ್ರ ಪ್ರದೇಶ ಮೂಲದ ಸಾಫ್ಟ್ ವೇರ್ ಎಂಜಿನೀಯರ್ ಪತ್ನಿ ಸುನಯನ ದುಮಾಲಾ ಕೋರಿದ್ದಾರೆ.
ಅಮಿತಾಬ್ ಸರ್, ನಿಮ್ಮ ಹಾಡಿಗೆ ಡ್ಯಾನ್ಸ್ ಮಾಡದೇ ಅಲ್ಲಿ ಯಾವುದೇ ಪಾರ್ಟಿ ಮುಗಿಯುತ್ತಿರಲಿಲ್ಲ, ನನ್ನ ಪತಿ ಶ್ರೀನಿವಾಸ್ 6.2 ಅಡಿ ಹಾಗೂ ನಾನು 5 ಅಡಿ ಎತ್ತರವಿದ್ದೆ, ಹೀಗಾಗಿ ಸ್ನೇಹಿತರು ನಮ್ಮನ್ನು ಪ್ರೀತಿಯಿಂದ ಅಮಿತಾಬ್ ಮತ್ತು ಜಯಾ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಶಾರೂಖ್ ಸರ್, ಶ್ರೀನಿವಾಸ್ ನಿಮ್ಮ ಬಹು ದೊಡ್ಡ ಅಭಿಮಾನಿ, ಇತ್ತೀಚೆಗೆ ಬಿಡುಗಡೆಯಾದ ರಾಯೀಸ್ ಸಿನಿಮಾ ನೋಡಿದ್ದರು, ಹೀಗಾಗಿ ಅಮೆರಿಕಾದಲ್ಲಿರುವ ಭಾರತೀಯರಿಗೆ ಪ್ರೀತಿ ಹಾಗೂ ಆತ್ಮ ವಿಶ್ವಾಸ ತುಂಬವಂತ ಪ್ರಬಲ ಸಂದೇಶ ನೀಡಲು ನಾನು ನಿಮ್ಮ ಸಹಕಾರ ಕೋರುತ್ತಿದ್ದೇನೆ ಎಂದು ಸುನಯನ ಹೇಳಿದ್ದಾರೆ. ತಮ್ಮ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿರುವ ಸುನಯನ ತಮ್ಮ ಬ್ಲಾಗ್ ನಲ್ಲಿ ಈ ವಿಷಯ ಬರೆದುಕೊಂಡಿದ್ದಾರೆ.
ತಾವು ಶ್ರೀನಿವಾಸ್ ಅವರನ್ನು ಅರ್ಕುಟ್ ನಲ್ಲಿ ಭೇಟಿಯಾಗಿ ನಂತರ ಪರಸ್ಪರ ಮೆಚ್ಚಿ ಮದುವೆಯಾಗಿದ್ದರು. ತಾವು ಅಮೆರಿಕಾಗೆ ಹೋಗಬೇಕು ಎನ್ನುವ ಅದಮ್ಯ ಆಸೆಗೆ ಶ್ರೀನಿವಾಸ್ ನೆರವು ನೀಡಿದ್ದನ್ನು ಅವರು ಸ್ಮರಿಸಿದ್ದಾರೆ. ಅಮೆರಿಕಾದಲ್ಲಿರುವ ಎಲ್ಲಾ ವಲಸಿಗರ ಮನಸಲ್ಲಿ ನಾವು ಇಲ್ಲಿಗೆ ಸೇರಿದವರಾ ಎಂಬ ಪ್ರಶ್ನೆ ಕಾಡುತ್ತಿರುತ್ತದೆ ಎಂದು ಬರೆದಿದ್ದಾರೆ.
Advertisement