ಕೊಚ್ಚಿ: ಕೇರಳ ಹಣಕಾಸು ಸಚಿವ ಟಿಎಂ ಥಾಮಸ್ ಐಸಾಕ್ ಅವರು ಶುಕ್ರವಾರ 68ನೇ ರಾಜ್ಯ ಬಜೆಟ್ ಅನ್ನು ಮಂಡಿಸುತ್ತಿದ್ದು, ಪಿಣರಾಯ್ ವಿಜಯನ್ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.
ಈ ಮಧ್ಯೆ ರಾಜ್ಯಾದ್ಯಂತ ಇಂಟರ್ ನೆಟ್ ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ, ನಿರಾಶ್ರಿತರಿಗೆ ಮನೆ ಹಾಗೂ ವಿಕಲಚೇತನರಿಗೆ ಮೀಸಲಾತಿ ಸೇರಿದಂತೆ ಬಜೆಟ್ ನ ಕೆಲವು ಪ್ರಮುಖ ಸಾಮಾಜಿಕ ತಾಣದಲ್ಲಿ ಸೋರಿಕೆಯಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇಂದು ಬೆಳಗ್ಗೆ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಸೋರಿಕೆ ವಿಚಾರ ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸಿದರು. ಹಣಕಾಸು ಸಚಿವರು ಬಜೆಟ್ ಮಂಡಿಸುತ್ತಿದ್ದ ವೇಳೆಯೇ ಪ್ರತಿಪಕ್ಷಗಳ ಕೆಲ ಸದಸ್ಯರು ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು.
ಥಾಮಸ್ ಐಸಾಕ್ ಅವರು ಬಜೆಟ್ ಮಂಡಿಸುವ ಮುನ್ನವೇ ಬಜೆಟ್ ಕೆಲ ಪ್ರಮುಖ ಅಂಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಜೆಟ್ ಮೌಲ್ಯ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲ ಅವರು ಆರೋಪಿಸಿದ್ದಾರೆ.