ಭೋಪಾಲ್: ಭೋಪಾಲ್ - ಉಜ್ಜನಿ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರು ಐಎಸ್ಐಎಸ್ ತತ್ವ ಸಿದ್ಧಾಂತಗಳಿಂದ ಪ್ರೆರೇಪಿತರಾಗಿದ್ದಾರೆ ಮತ್ತು ಇದೊಂದು 'ಪ್ರಾಯೋಗಿಕ ಸ್ಫೋಟ' ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಬುಧವಾರ ಹೇಳಿದ್ದಾರೆ.
ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆಗೆ ಉತ್ತರ ನೀಡಿದ ಮಧ್ಯಪ್ರದೇಶ ಸಿಎಂ, ಲಖನೌನಿಂದ ಆಗಮಿಸಿದ ದುಷ್ಕರ್ಮಿಗಳು ನಿನ್ನೆ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದಿದ್ದಾರೆ.
ರೈಲಿನಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರು ಐಎಸ್ಐಎಸ್ ಉಗ್ರ ಸಂಘಟನೆಯಿಂದ ಪ್ರೆರೇಪಿತರಾಗಿದ್ದು, ಮತ್ತಷ್ಟು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಬಜೆಟ್ ಅಧಿವೇಶನದಲ್ಲಿ ಸಿಎಂ ತಿಳಿಸಿದ್ದಾರೆ.
ನಿನ್ನೆ ಮಧ್ಯಪ್ರದೇಶದ ಶಜಾಪುರ್ ಜಿಲ್ಲೆಯ ಜಬ್ಡಿ ನಿಲ್ದಾಣದ ಬಳಿ ಉಗ್ರರು ಐಇಡಿ ಬಳಿಸಿ ಭೋಪಾಲ್ - ಉಜ್ಜನಿ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದರು. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಆ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.