ದಿಗ್ವಿಜಯ್ ಸಿಂಗ್ ವಿರುದ್ಧ ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲೂಸಿನ್ಹೊ ಫೆಲರೊ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸದಂತೆ ನಮ್ಮನ್ನು ತಡೆದಿದ್ದು ದಿಗ್ವಿಜಯ್ ಸಿಂಗ್ ಅವರೇ ಎಂದು ಆರೋಪಿಸಿದ್ದಾರೆ. ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯಪಾಲರಿಗೆ ನೀಡಬೇಕಿದ್ದ ಸರ್ಕಾರ ರಚನೆಗೆ ಹಕ್ಕು ಮಂಡನೆ ಪತ್ರವನ್ನು ಸಿದ್ಧಪಡಿಸಿದ್ದೆವು. ಆದರೆ ಗೋವಾ ರಾಜ್ಯಪಾಲರೇ ಸರ್ಕಾರ ರಚಿಸುವಂತೆ ಅತಿ ದೊಡ್ಡ ಪಕ್ಷಕ್ಕೆ ಆಹ್ವಾನ ನೀಡುತ್ತಾರೆ. ಅಲ್ಲಿಯವರೆಗೂ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಪತ್ರವನ್ನು ಸಲ್ಲಿಸಬೇಡಿ ಎಂದು ದಿಗ್ವಿಜಯ್ ಸಿಂಗ್ ಹಾಗೂ ಗೋವಾ ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಕೆಸಿ ವೇಣುಗೋಪಾಲ್ ಸೂಚನೆ ನೀಡಿದ್ದರು. ದಿಗ್ವಿಜಯ್ ಸಿಂಗ್ ಮಾತನ್ನು ಕೇಳಿ ರಾಜ್ಯಪಾಲರಿಗೆ ಹಕ್ಕು ಮಂಡನೆ ಪತ್ರ ಸಲ್ಲಿಸಲಿಲ್ಲ. ಪರಿಣಾಮ ಬಿಜೆಪಿ ಸರ್ಕಾರ ರಚಿಸುವುದಕ್ಕೆ ಸಾಧ್ಯವಾಯಿತು ಎಂದು ಲೂಸಿನ್ಹೊ ಫೆಲರೊ ಹೇಳಿದ್ದಾರೆ.