ಆದಿತ್ಯನಾಥ್ ಬದಲು ಬೇರೊಬ್ಬರನ್ನು ಸಿಎಂ ಮಾಡಲು ಮೋದಿ ಇಚ್ಛಿಸಿದ್ದರು!

ಉತ್ತರ ಪ್ರದೇಶದಲ್ಲಿ ಯೋಗಿಯ ಆಡಳಿತ ಪರ್ವ ಪ್ರಾರಂಭವಾಗಿದೆ. ಈ ಹಂತದಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿದ್ದು, ಯೋಗಿ ಆದಿತ್ಯನಾಥ್ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಸಿಎಂ....
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಉತ್ತರ ಪ್ರದೇಶದಲ್ಲಿ ಯೋಗಿಯ ಆಡಳಿತ ಪರ್ವ ಪ್ರಾರಂಭವಾಗಿದೆ. ಈ ಹಂತದಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿದ್ದು, ಯೋಗಿ ಆದಿತ್ಯನಾಥ್ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಸಿಎಂ ಅಭ್ಯರ್ಥಿಯಾಗಿದ್ದರಾ? ಎಂಬ ಪ್ರಶ್ನೆ ಮೂಡಿದೆ. 
ಮುಖ್ಯಮಂತ್ರಿಯ ಆಯ್ಕೆ ವೇಳೆಯಲ್ಲಿ ಮನೋಜ್ ಸಿನ್ಹಾ ಅವರ ಹೆಸರು ಮುಂಚೂಣಿಯಲ್ಲಿತ್ತು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಥಮ ಆದ್ಯತೆಯೂ ಮನೋಜ್ ಸಿನ್ಹಾ ಅವರೇ ಆಗಿದ್ದರು, ಆದರೆ ಅಂದುಕೊಂಡಂತೆ ಆಗದೇ ಮನೋಜ್ ಸಿನ್ಹಾ ಉತ್ತರ ಪ್ರದೇಶದ ನಿತಿನ್ ಪಟೇಲ್ ಆದರೆಂದು ವಿಶ್ಲೇಷಿಸಲಾಗುತ್ತಿದೆ. 
ಗುಜರಾತ್ ನಲ್ಲಿ ಆನಂದಿ ಬೆನ್ ಪಟೇಲ್ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ ಬಳಿಕ ನಿತಿನ್ ಪಟೇಲ್ ಗುಜರಾತ್ ನ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ವಿಜಯ್ ರುಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಪ್ರದೇಶದಲ್ಲಿಯೂ ಇದೇ ಮಾದರಿಯಲ್ಲಿ ಕೊನೆ ಘಳಿಗೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬೇಕಿದ್ದ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮನೋಜ್ ಸಿನ್ಹಾ ಅವರು ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಂದ ಬಳಿಕ ಅವರೇ ಸಿಎಂ ಆಗಲಿದ್ದಾರೆ ಎಂದು ಮಾಧ್ಯಮಗಳು ವಿಶ್ಲೇಷಣೆ ಮಾಡಿದ್ದವು. ಆದರೆ ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅಸಮಾಧಾನಗೊಂಡು ಅಮಿತ್ ಷಾ ಬಳಿ ಪ್ರತಿಭಟನೆ ವ್ಯಕ್ತಪಡಿಸಿದರು. ಇದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಮಸ್ಯೆ ಉಂಟಾಗಲಿತ್ತು ಎಂಬ ಸಂದೇಶ ಅಮಿತ್ ಷಾ ಅವರಿಗೆ ರವಾನೆಯಾಗಿತ್ತು. ಶುಕ್ರವಾರದ ವರೆಗೂ ಮನೋಜ್ ಸಿನ್ಹಾ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಶನಿವಾರ ನಡೆದ ಬೆಳವಣಿಗೆಯಲ್ಲಿ ಕೇಶವ್ ಪ್ರಸಾದ್ ಮೌರ್ಯ ಯೋಗಿ ಆದಿತ್ಯನಾಥ್ ಸಿಎಂ ಆಗುವುದಾದರೆ ಒಪ್ಪುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೇ ಈ ಷರತ್ತಿಗೆ ಆರ್ ಎಸ್ಎಸ್ ನ ಹಿರಿಯ ನಾಯಕರು ಹಾಗೂ ಪಕ್ಷದ ಒಳಗಿನಿಂದಲೇ ಬೆಂಬಲ ಪಡೆಯುವಲ್ಲಿ ಯಶಸ್ವಿಯೂ ಆದರು. ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಪಕ್ಷದಲ್ಲಿನ ಬೆಂಬಲ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಾರ್ಯಸೂಚಿಗಳನ್ನು ಜಾರಿಗೊಳಿಸುವುದಕ್ಕೆ ಸಮರ್ಥವಾದ ವ್ಯಕ್ತಿತ್ವ ಹೊಂದಿದ್ದರಿಂದ ಯೋಗಿ ಆದಿತ್ಯನಾಥ್ ಅವರನ್ನು ಕೊನೆ ಘಳಿಗೆಯಲ್ಲಿ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com