ನವದೆಹಲಿ: ಅಕ್ರಮವಾಗಿ ಹಣ ವಿನಿಮಯ ಮಾಡಿಕೊಂಡ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ ಶೇಖರ್ ರೆಡ್ಡಿ ಅವರನ್ನು ಜಾರಿ ನಿರ್ದೇಶನಾಲಯದ ಚೆನ್ನೈ ವಿಭಾಗ ಕಳೆದ ತಡರಾತ್ರಿ ಮತ್ತೊಮ್ಮೆ ಬಂಧಿಸಿದೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ರೆಡ್ಡಿಯವರನ್ನು 130 ಕೋಟಿ ರೂಪಾಯಿಗೂ ಅಧಿಕ ದಾಖಲೆಗಳಿಲ್ಲದ ಹಣ ಸಂಗ್ರಹದ ಆರೋಪದ ಮೇಲೆ ಸಿಬಿಐ ಬಂಧಿಸಿ ಕಸ್ಟಡಿಗೆ ಒಯ್ದಿತ್ತು. ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ರೆಡ್ಡಿಯವರನ್ನು ಮಾರ್ಚ್ 28ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ರೆಡ್ಡಿ ಬಂಧನದ ನಂತರ ತನಿಖಾಧಿಕಾರಿಗಳು ಚೆನ್ನೈಯಲ್ಲಿ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎನ್.ರಾಮ ಮೋಹನ್ ರಾವ್ ಮತ್ತು ಅವರ ಪುತ್ರ ವಿವೇಕ್ ಪಪ್ಪಿಸೆಟ್ಟಿಯವರ ಮನೆ ಮೇಲೆ ದಾಳಿ ನಡೆಸಿದ್ದರು.
ಮೂಲಗಳ ಪ್ರಕಾರ, ರಾಮಮೋಹನ್ ರಾವ್ ಮತ್ತು ಅವರ ಪುತ್ರ ದಾಖಲೆಗಳಿಲ್ಲದ ಅಪಾರ ಪ್ರಮಾಣದ ಹಣ ಸಂಗ್ರಹಿಸಿದ ಆರೋಪದ ಮೇಲೆ ಅವರನ್ನು ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾ ಶಾಖೆಯ ಆದಾಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೇಖರ್ ರೆಡ್ಡಿ ಇತ್ತೀಚೆಗೆ ಸಿಬಿಐ ಕೇಸಿನಲ್ಲಿ ಜಾಮೀನಿನ ಮೇಲೆ ನ್ಯಾಯಾಲಯದಿಂದ ಹೊರಬಂದಿದ್ದರು.